ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿರತೆಗಳ ಹಾವಳಿ ನಿವಾರಿಸುವ ನಿಟ್ಟಿನಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸಬೇಕು. ಅರಣ್ಯಗಳ ಅಕ್ಕಪಕ್ಕ ವಾಸ ಮಾಡುವ ಜನರಿಗೆ ರಕ್ಷಣೆ ಕಲ್ಪಿಸಬೇಕು. ಚಿರತೆಗಳಿಗೆ ಬಲಿಯಾದವರ ಕುಟುಂಬಗಳಿಗೆ ತಕ್ಷಣವೇ ಸೂಕ್ತ ಪರಿಹಾರ ನೀಡಬೇಕು ಎಂಬುದಾಗಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.
ಈ ಕುರಿತಂತೆ ಸರಣಿ ಟ್ವಿಟ್ ಮಾಡಿದ್ದು, ರಾಜ್ಯದಲ್ಲಿ ಚಿರತೆ ದಾಳಿಗೆ ತುತ್ತಾಗುತ್ತಿರುವವರ ಸಂಖ್ಯೆ ದಿನೇದಿನೆ ಅಧಿಕವಾಗುತ್ತಿದೆ. ಅರಣ್ಯ ಇಲಾಖೆ ಈ ಬಗ್ಗೆ ಅತೀವ ನಿರ್ಲಕ್ಷ್ಯ ವಹಿಸಿರುವುದು ನನ್ನ ಗಮನಕ್ಕೆ ಬಂದಿದೆ.
ಮೇಘನಾ ಎಂಬ ವಿದ್ಯಾರ್ಥಿನಿಯೊಬ್ಬರು ಚಿರತೆಗೆ ಬಲಿಯಾಗಿರುವ ಘಟನೆ ನನ್ನ ಮನ ಕಲಕಿದೆ.ಕೆಲ ದಿನಗಳ ಹಿಂದೆ ಮತ್ತೊಬ್ಬ ವಿದ್ಯಾರ್ಥಿ ಚಿರತೆ ದಾಳಿಯಿಂದ ಜೀವ ಕಳೆದುಕೊಂಡಿದ್ದ. ಅರಣ್ಯ ಇಲಾಖೆ ಕಾರ್ಯಕ್ಷಮತೆ ಕ್ಷೀಣಿಸಿದ ಕಾರಣಕ್ಕೆ ಇಂಥ ಘಟನೆಗಳು ನಡೆಯುತ್ತಿವೆ ಎನ್ನುವುದು ನನ್ನ ಸ್ಪಷ್ಟ ಅಭಿಪ್ರಾಯ ಎಂದಿದ್ದಾರೆ.
ತುರಹಳ್ಳಿ ಅರಣ್ಯ ಪ್ರದೇಶದಲ್ಲಿ ಚಿರತೆ ದಾಳಿಯಿಂದ ಇಬ್ಬರು ಮಹಿಳೆಯರು ತೀವ್ರವಾಗಿ ಗಾಯಗೊಂಡಿದ್ದರು ಎಂಬುದನ್ನು ಮಾಧ್ಯಮಗಳಲ್ಲಿ ಗಮನಿಸಿದ್ದೆ. ನಂದಿಬೆಟ್ಟದ ಆಸುಪಾಸಿನಲ್ಲಿ ಕೂಡ ಚಿರತೆಗಳ ಹಾವಳಿ ಹೆಚ್ಚಾಗಿದೆ. ರಾತ್ರಿ ಹೊತ್ತು ಜನ ಸಂಚಾರವೇ ಕಷ್ಟವಾಗಿದೆ ಎಂದು ಹೇಳಿದ್ದಾರೆ.
ಚಿರತೆಗಳ ಇರುವಿಕೆಯನ್ನು ಪತ್ತೆ ಹಚ್ಚಿ ಜನರನ್ನು ಎಚ್ಚರಗೊಳಿಸುವುದು ಅರಣ್ಯ ಇಲಾಖೆಯ ಹೊಣೆ. ಆ ಚಿರತೆಗಳನ್ನು ಹಿಡಿದು ದಟ್ಟ ಕಾಡಿಗೆ ಬಿಡಬೇಕಾದ ಅಗತ್ಯವಿದೆ. ಆದರೆ, ಅರಣ್ಯ ಇಲಾಖೆ ಗಾಢ ನಿದ್ರೆಯಲ್ಲಿ ಇದ್ದಂತೆ ಇದೆ. ಹಾಗಾದರೆ, ಇನ್ನೆಷ್ಟು ಜೀವಗಳು ಹೋಗಬೇಕು? ಎಂದು ಪ್ರಶ್ನಿಸಿದ್ದಾರೆ.