ಹೊಸ ದಿಗಂತ ವರದಿ, ಅಂಕೋಲಾ:
ಸ್ವಾತಂತ್ರ್ಯ ಸೇನಾನಿ ದಿವಂಗತ ಭಾಸಗೋಡ ಮಾಣಿ ನಾಯಕ ಸ್ಮರಣಾರ್ಥ 18 ನೇ ವರ್ಷದ ಜ್ಞಾನಸತ್ರ ಕಾರ್ಯಕ್ರಮ ಮೇ 27 ರಂದು ಬೆಳಿಗ್ಗೆ 9.30 ರಿಂದ ಭಾಸಗೋಡ ಶಾಸಕರ ಮಾದರಿ ಶಾಲೆಯ ಆರ್.ಎನ್. ಶೆಟ್ಟಿ ಸಭಾಭವನದಲ್ಲಿ ನಡೆಯಲಿದೆ.
ಕೋಲಾಪುರ ಕನೇರಿಯ ಸಿದ್ದಗಿರಿ ಮಹಾ ಸಂಸ್ಥಾನದ ಶ್ರೀಕಾಡಸಿದ್ಧೇಶ್ಧರ ಸ್ವಾಮಿಜಿಯವರು ಕಾರ್ಯಕ್ರಮ ಉದ್ಘಾಟಿಸಿ ಭೂಮಿ ಮತ್ತು ಮನುಷ್ಯನ ಆರೋಗ್ಯಕ್ಕೆ ಗೋವು ಎನ್ನುವ ವಿಷಯಧ ಕುರಿತು ಉಪನ್ಯಾಸ ನೀಡಲಿದ್ದಾರೆ.
ಸನಾತನ ಧಾರ್ಮಿಕ ಟ್ರಸ್ಟ್ ಅಧ್ಯಕ್ಷ ಡಾ.ಎಚ್. ಎಸ್. ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದು ವಿಶ್ರಾಂತ ಪೊಲೀಸ್ ವರಿಷ್ಠ ವಿನಯ ಗಾಂವಕರ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.
ಕಾರ್ಯಕ್ರಮ ಉದ್ಘಾಟಿಸಿ ಉಪನ್ಯಾಸ ನೀಡಲಿರುವ ಮಹಾರಾಷ್ಟ್ರದ ಕೋಲಾಪುರ ಜಿಲ್ಲೆಯ ಸಿದ್ದಗಿರಿ ಕನೇರಿ ಮಠದ ಕಾಡಸಿದ್ದೇಶ್ವರ ಸ್ವಾಮಿಜಿಯವರು ಕೃಷಿ, ಗ್ರಾಮೀಣಾಭಿವೃದ್ಧಿ, ಶಿಕ್ಷಣ, ಆರೋಗ್ಯ, ಸನಾತನ ಸಂಸ್ಕೃತಿ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಕೊಡುಗೆ ನೀಡುತ್ತಾ ಬಂದಿದ್ದು , ಲಕ್ಷಾಂತರ ರೈತರಿಗೆ ಸಾವಯವ ಕೃಷಿ ಪದ್ಧತಿ ಅನುಸರಿಸಲು ಮಾರ್ಗದರ್ಶನ ಮಾಡಿ ಉತ್ತಮ ಕೃಷಿಕರಾಗಿ ಅವರು ಬದುಕು ಕಟ್ಟಿಕೊಳ್ಳಲು ದಾರಿಯಾಗಿದ್ದಾರೆ.
ದೇಶಾದ್ಯಂತ ಸಂಚರಿಸಿ ದೇಶಿ ಬೀಜಗಳನ್ನು ಕೃಷಿ ಕ್ಷೇತ್ರದಲ್ಲಿ ಮರಳಿ ಪರಿಚಯಿಸುವ ಕೆಲಸ ಮಾಡುತ್ತಿರುವ ಸ್ವಾಮೀಜಿ ದೇಶದಲ್ಲೇ ಮೊದಲ ಕೃಷಿ ವಿಜ್ಞಾನ ಕೇಂದ್ರ ಸ್ಥಾಪಿಸಿ ಗೋವು ಆಧಾರಿತ ಕೃಷಿಯನ್ನು ಪರಿಚಯಿಸುವ ಕೆಲಸ ಮಾಡಿದ್ದಾರೆ.
ದೇಶಿ ತಳಿಯ 28 ಬಗೆಯ ಸುಮಾರು 2 ಸಾವಿರಕ್ಕೂ ಹೆಚ್ಚಿನ ಗೋವುಗಳನ್ನು ಸಾಕಿ ಗೋವುಗಳು ಸಾವಯವ ಕೃಷಿ ಪದ್ಧತಿಯ ಮೂಲಾಧಾರ ಎನ್ನುವುದನ್ನು ರೈತರಿಗೆ ತಿಳಿಸುವ ಮೂಲಕ ದೇಶಿ ಗೋವು ತಳಿಗಳನ್ನು ಸಮೃದ್ದಗೊಳಿಸುವ ಕೆಲಸ ಮಾಡುತ್ತಿದ್ದಾರೆ.
ಆಯುರ್ವೇದ ಆಸ್ಪತ್ರೆ,ಶಾಲೆ, ಗುರುಕುಲ ಶಿಕ್ಷಣ, ಅನಾಥ ಮಕ್ಕಳ ಪಾಲನೆ ಮೊದಲಾದ ಉಚಿತ ಸೇವೆಗಳಜೊತೆಗೆ ಸನಾತನ ಧರ್ಮ ಉಳಿಸಿ, ಬೆಳೆಸುವ ಸಂಕಲ್ಪ ಹೊಂದಿರುವ ಮಹಾನ್ ಸಂತ ಅಂಕೋಲೆಯ ಪುಣ್ಯಭೂಮಿಗೆ ಆಗಮಿಸುತ್ತಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಜನರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಸಂಘಟಕ ವಕೀಲ ನಾಗರಾಜ ನಾಯಕ ಅವರು ತಿಳಿಸಿದ್ದಾರೆ.