ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಸಚಿವ ಸಂಪುಟ ರೈತರಿಗೆ ಉಡುಗೊರೆ ನೀಡಿದ್ದು, ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಆರು ಕೃಷಿ ಉತ್ಪನ್ನಗಳಿಗೆ ಎಂಎಸ್ಪಿ(MSP) ಹೆಚ್ಚಳವನ್ನು ಘೋಷಿಸಿದೆ.
ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಣಯಗಳ ಕುರಿತು ಮಾಹಿತಿ ನೀಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್, ಮುಂಬರುವ ಮಾರುಕಟ್ಟೆ ಋತು 2025-26ಕ್ಕೆ ರಾಬಿ ಬೆಳೆಗಳಿಗೆ ಹೊಸ ಕನಿಷ್ಠ ಬೆಂಬಲ ಬೆಲೆಗಳನ್ನು (MSP) ಕೇಂದ್ರ ಸಚಿವ ಸಂಪುಟ ಅನುಮೋದಿಸಿದೆ. ರೈತರಿಗೆ ಉತ್ತಮ ಆದಾಯವನ್ನು ಖಚಿತಪಡಿಸಿಕೊಳ್ಳಲು ಮತ್ತು ರಾಬಿ ಋತುವಿನಲ್ಲಿ ಪ್ರಮುಖ ಬೆಳೆಗಳ ಕೃಷಿಯನ್ನು ಉತ್ತೇಜಿಸಲು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಪರಿಷ್ಕೃತ ಎಂಎಸ್ಪಿ ದರಗಳು ರೈತರ ಉತ್ಪನ್ನಗಳಿಗೆ ನ್ಯಾಯಯುತ ಬೆಲೆಯನ್ನು ನೀಡುವ ಗುರಿಯನ್ನು ಹೊಂದಿವೆ.
ಮಾನ್ಸೂನ್ ಮುಗಿದ ನಂತರ ಚಳಿಗಾಲದಲ್ಲಿ ರಾಬಿ ಬೆಳೆಯನ್ನು ಬಿತ್ತಲಾಗುತ್ತದೆ ಮತ್ತು ಬೇಸಿಗೆಯಲ್ಲಿ ಕೊಯ್ಲು ಮಾಡಲಾಗುತ್ತದೆ. ಅಕ್ಟೋಬರ್ನಿಂದ ಏಪ್ರಿಲ್ ತಿಂಗಳವರೆಗೆ ಈ ಬೆಳೆಗಳ ಅವಧಿ ಇರುತ್ತದೆ. ಗೋಧಿ, ಬಾರ್ಲಿ, ಸಾಸಿವೆ, ಹಸಿರು ಬಟಾಣಿ, ಜೀರಿಗೆ, ಕೊತ್ತಂಬರಿ, ಓಟ್ಸ್ ಮುಂತಾದವು ರಾಬಿ ಬೆಳೆಗಳಾಗಿವೆ. 2025-26ರ ಮಾರ್ಕೆಟಿಂಗ್ ಸೀಸನ್ಗಾಗಿ ರಬಿ ಬೆಳೆಗಳಿಗೆ ಹೆಚ್ಚಿನ ಕನಿಷ್ಟ ಬೆಂಬಲ ಬೆಲೆ (MSP)ಗೆ ಕ್ಯಾಬಿನೆಟ್ ಅನುಮೋದನೆ ನೀಡಿದೆ.
ಪ್ರಮುಖ ರಾಬಿ ಬೆಳೆಯಾದ ಗೋಧಿಗೆ MSPಯನ್ನು ಕ್ವಿಂಟಾಲ್ಗೆ 150 ರೂ. ಹೆಚ್ಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಮೂಲಕ ಗೋಧಿ ಪ್ರತಿ ಕ್ವಿಂಟಾಲ್ಗೆ ಹೊಸ ಬೆಲೆ 2,425 ರೂ.ಗೆ ತಲುಪಿದೆ. ಹಿಂದಿನ ಹಂಗಾಮಿನಲ್ಲಿ 2,275 ರೂ. ಇತ್ತು. ದೇಶದ ಅನೇಕ ಭಾಗಗಳಲ್ಲಿ ಗೋಧಿ ಪ್ರಧಾನ ಬೆಳೆಯಾಗಿದೆ. ಹೀಗಾಗಿ, ಈ ಹೆಚ್ಚಳವು ರೈತರಿಗೆ ಪ್ರಯೋಜನವನ್ನು ನೀಡುತ್ತದೆ. ವಿಶೇಷವಾಗಿ ಗೋಧಿ ಪ್ರಮುಖ ಬೆಳೆಯಾಗಿರುವ ಉತ್ತರ ಭಾರತದ ರೈತರಿಗೆ ಇದರಿಂದ ಪ್ರಯೋಜನವಾಗಲಿದೆ.
ಬೆಳೆಗಳ ಎಂಎಸ್ಪಿಯನ್ನು ಕ್ವಿಂಟಲ್ಗೆ 300 ರೂ.ಗಳಷ್ಟು ಹೆಚ್ಚಿಸಲಾಗಿದೆ. ಅದೇ ಸಮಯದಲ್ಲಿ, ಬೆಳೆಗಳ ಮಾರ್ಜಿನ್ ವೆಚ್ಚವನ್ನು 50 ಪ್ರತಿಶತದಷ್ಟು ಹೆಚ್ಚಿಸಲಾಗಿದೆ ಡಂದು ವಿವರಿಸಿದರು.ಗೋಧಿ ಕ್ವಿಂಟಲ್ಗೆ 2425 ರೂ., ಬಾರ್ಲಿಗೆ 130 ರೂ., ಕಡಲೆಗೆ 210 ರೂ., ಸೋನಾ ಮಸೂರಗೆ 275 ರೂ., ಸಾಸಿವೆಗೆ 300 ರೂ., ಕುಸುಮಲಕ್ಕಿಗೆ 140 ರೂ.,ಗೆ ಎಂಎಸ್ಪಿ ಹೆಚ್ಚಿಸಿ ಕ್ರಮ ಕೈಗೊಂಡಿದೆ ಎಂದು ತಿಳಿಸಿದರು.