ಹೊಸ ದಿಗಂತ ವರದಿ, ಬೆಳ್ತಂಗಡಿ
ಬೆಳ್ತಂಗಡಿ ತಾಲೂಕಿನ ಪ್ರಮುಖ ಚಾರಣ, ಜಲಪಾತಗಳ ವೀಕ್ಷಣೆಗೆ ಕಾಡಿಚ್ಚು ಇತ್ಯಾದಿ ಅನಾಹುತಗಳು ನಡೆಯದಂತೆ ಹಾಗೂ ಹುಲಿಗಣತಿ ಹಿನ್ನಲೆಯಲ್ಲಿ ಹೇರಿದ್ದ ನಿರ್ಬಂಧವನ್ನು ಜೂನ್ 1 ರಿಂದ ತೆರೆದುಕೊಳ್ಳಲಿದೆ. ಈ ಮೂಲಕ ಪ್ರವಾಸಿಗರಿಗೆ ವನ್ಯಜೀವಿ ಅರಣ್ಯ ಇಲಾಖೆ ಸಿಹಿ ಸುದ್ದಿ ನೀಡಿದೆ.
ಕಳೆದ ಜನವರಿ ತಿಂಗಳಲ್ಲಿ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದಿಂದೆ ನೇತ್ರಾವತಿ ಪೀಕ್, ಬಂಡಾಜೆ ಜಲಪಾತ, ಗಡಾಯಿಕಲ್ಲು ಮೊದಲಾದ ಸ್ಥಳಗಳಿಗೆ ಪ್ರವಾಸಿಗರಿಗೆ ನಿಷೇಧ ಹೇರಿತ್ತು. ಬೇಸಿಗೆ ಕಾಲದಲ್ಲಿ ಬೆಂಕಿ ಪ್ರಕರಣ, ಕಾಗ್ನಿಟ್ಟು ಇತ್ಯಾದಿ ಅನಾಹುತಗಳು ನಡೆಯದಂತೆ ಹಾಗೂ ಹುಲಿಗಣತಿ ಹಿನ್ನೆಲೆಯಲ್ಲಿ ಈ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಇದೀಗ ಬೆಳ್ತಂಗಡಿ ವನ್ಯಜೀವಿ ವಿಭಾಗ ನಿಷೇಧ ಹಿಂಪಡೆದಿದ್ದು, ಜೂ.1 ರಿಂದ ಪ್ರವಾಸಿಗರ ವೀಕ್ಷಣೆಗೆ ಮುಕ್ತವಾಗಲಿದೆ.
ಪ್ರವಾಸಿಗರಿಗೆ ಗುರುತಿನ ಪತ್ರ ಕಡ್ಡಾಯ
ಪ್ರವಾಸಿಗರು ಪರಿಸರದ ಸ್ವಚ್ಛತೆ ಕಾಪಾಡ ಬೇಕು. ಚಾರಣಿಗರು ಆದ್ಯತೆ ನೀಡಿ, ಇಲಾಖೆಯ ನಿಯಮಗಳನ್ನು ಪಾಲಿಸಿ ಪ್ರವೇಶಿಸಬೇಕು. ಇಲಾಖೆ ನಿಗದಿಪಡಿಸಿದ ಸ್ಥಳಗಳ ಹೊರೆತು ಇತರೆಡೆ ಪ್ರವೇಶಾವಕಾಶ ಇರುವುದಿಲ್ಲ. ಪ್ರತಿಯೊಬ್ಬ ಪ್ರವಾಸಿಗ ಕಡ್ಡಾಯವಾಗಿ ಮೂಲ ಗುರುತಿನ ಪತ್ರದೊಂದಿಗೆ ಆಗಮಿಸಬೇಕು. ಗುರುತು ಪತ್ರ ಇಲ್ಲದವರಿಗೆ ಪ್ರವೇಶಾವಕಾಶ ಇರುವುದಿಲ್ಲ ಎಂದು ಇಲಾಖೆ ತಿಳಿಸಿದೆ.



