ಹೊಸ ದಿಗಂತ ವರದಿ, ಅಂಕೋಲಾ:
ಆಟೋ ರಿಕ್ಷಾಕ್ಕೆ ಮೀನು ತುಂಬಿದ ಗೂಡ್ಸ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಆರು ಜನರು ಗಂಭೀರವಾಗಿ ಗಾಯಗೊಂಡ ಘಟನೆ ತಾಲೂಕಿನ ಶೆಟಗೇರಿ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸಂಭವಿಸಿದೆ.
ಆಟೋ ರಿಕ್ಷಾ ಚಾಲಕ ಅಂಕೋಲಾ ಪೂಜಗೇರಿ ನಿವಾಸಿ ವಿನೋದ ಚೂಡಾಮಣಿ ಗಾಂವಕರ್ (46) ಮತ್ತು ಆಟೋ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ನವಿ ಮುಂಬೈ ನಿವಾಸಿಗಳಾದ ಪರೇಶ ಪ್ರಭಾಕರ ಶೊಯೆನ್(50) ಅವರ ಪತ್ನಿ ಭಾಗ್ಯಶ್ರೀ ಶೋಯನ್(42) ಮಕ್ಕಳಾದ ಶಶಾಂಕ (16) ಗೌರಂಗ(10) ಸಂಬಂಧಿ ಮೀರಾ ನಂದಕುಮಾರ್ ಶೋಯನ್ (77) ಎನ್ನುವವರಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ.
ಅಂಕೋಲಾ ಕಡೆ ಹೋಗುತ್ತಿದ್ದ ಆಟೋ ರಿಕ್ಷಾಕ್ಕೆ ಹಿಂದಿನಿಂದ ಅತಿವೇಗದಲ್ಲಿ ಬಂದ ಮೀನು ತುಂಬಿದ ಲಾರಿ ಡಿಕ್ಕಿ ಹೊಡೆದಿರುವುದೇ ಅಪಘಾತಕ್ಕೆ ಕಾರಣವಾಗಿದ್ದು ಎರಡೂ ವಾಹನಗಳು ಜಖಂಗೊಂಡಿವೆ.
ಮೀನು ಲಾರಿ ಚಾಲಕ ಕೇರಳ ಕಣ್ಢೂರು ನಿವಾಸಿ ಮಹಮ್ಮದ್ ಹಶೀಂ ಎಂಬಾತನ ಮೇಲೆ ದೂರು ದಾಖಲಾಗಿದ್ದು ಪಿ.ಎಸ್. ಐ ಸುನೀಲ ಹುಲ್ಗೊಳ್ಳಿ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ.