ಉಕ್ರೇನ್-‌ ರಷ್ಯಾ ಗಡಿ ಸಮಸ್ಯೆ: ಉಕ್ರೇನ್‌ ತೊರೆದು ತಾಯ್ನಾಡಿಗೆ ಬರುವಂತೆ ಭಾರತ ಸೂಚನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:
ರಷ್ಯಾ ಹಾಗೂ ಉಕ್ರೇನ್ ಗಡಿಯಲ್ಲಿ ಯುದ್ಧದ ಸೂಚನೆ ಎದುರಾಗಿದ್ದು, ಉಕ್ರೇನ್ ಸುತ್ತಲೂ ರಷ್ಯಾ ಸುತ್ತುವರೆದಿದೆ. ಈ ನಿಟ್ಟಿನಲ್ಲಿ ಉಕ್ರೇನ್ ನಲ್ಲಿರುವ ಭಾರತೀಯ ಪ್ರಜೆಗಳಿಗೆ ಆತಂಕ ಎದುರಾಗಿದೆ.
ಉಕ್ರೇನ್ ನಲ್ಲಿನ ಈ ಬೆಳವಣಿಗೆಯನ್ನು ಗಮನಿಸಿದ ಭಾರತ, ಉಕ್ರೇನ್ ನಲ್ಲಿರುವ ತನ್ನ ಪ್ರಜೆಗಳನ್ನು ತಾತ್ಕಾಲಿಕವಾಗಿ ತಾಯ್ನಾಡಿಗೆ ಮರಳುವಂತೆ ಸೂಚಿಸಿದೆ.
ಉಕ್ರೇನ್ ನಲ್ಲಿರುವ 20 ಸಾವಿರ ಭಾರತೀಯರ ಪೈಕಿ 18 ಸಾವಿರ ಜನರು ವಿದ್ಯಾರ್ಥಿಗಳಿದ್ದು, ಅವರ ಯೋಗ ಕ್ಷೇಮ ಕಾಪಾಡಲು ಭಾರತ ಮುಂದಾಗಿದೆ.
ಈ ಕುರಿತು ಉಕ್ರೇನ್ ನಲ್ಲಿರುವ ಭಾರತದ ರಾಯಭಾರ ಕಚೇರಿ ಹೇಳಿಕೆ ನೀಡಿದ್ದು, ಉಕ್ರೇನ್‌ನಲ್ಲಿನ ಸದ್ಯದ ಅನಿಶ್ಚಿತತೆ ಪರಿಸ್ಥಿತಿಯ ದೃಷ್ಟಿಯಿಂದ ಭಾರತೀಯ ಪ್ರಜೆಗಳು, ನಿರ್ದಿಷ್ಟವಾಗಿ ಉಳಿಯಲು ಅನಿವಾರ್ಯವಲ್ಲದ ವಿದ್ಯಾರ್ಥಿಗಳು ತಾತ್ಕಾಲಿಕವಾಗಿ ಹೊರಡಲು ಪರಿಗಣಿಸಬಹುದು” ಎಂದು ತಿಳಿಸಿದೆ.
ರಷ್ಯಾ ಉಕ್ರೇನ್ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿಯನ್ನು ಸೃಷ್ಟಿ ಮಾಡಿದ್ದು, ತನ್ನ ಸೈನಿಕರ ಸಂಖ್ಯೆ ಹಾಗೂ ಸೇನಾ ವಾಹನಗಳ ಸಂಖ್ಯೆಯನ್ನು ದಿನದಿಂದ ದಿನಕ್ಕೆ ಏರಿಕೆ ಮಾಡುತ್ತಿದೆ. ಈ ವಾತಾವರಣ ಗಮನಿಸುತ್ತಿದ್ದರೆ ಇನ್ನು ಕೆಲ ದಿನಗಳಲ್ಲಿ ಎರಡೂ ರಾಷ್ಟ್ರಗಳ ನಡುವೆ ಬಹು ದೊಡ್ಡ ಯುದ್ಧ ನಡೆಯುವ ಸಾಧ್ಯತೆ ಇದೆ.
ಈ ನಿಟ್ಟಿನಲ್ಲಿ ಉಕ್ರೇನ್ ನಲ್ಲಿನ ತಮ್ಮ ಪ್ರಜೆಗಳನ್ನು ವಾಪಾಸ್ ಕರೆತರಲು ಭಾರತ, ಅಮೆರಿಕ, ಜರ್ಮನಿ, ಇಟಲಿ, ಬ್ರಿಟನ್, ಐರ್ಲೆಂಡ್, ಕೆನಡಾ ಸೇರಿ ಹಲವು ರಾಷ್ಟ್ರಗಳು ಮುಂದಾಗಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!