ಹೊಸದಿಗಂತ ವರದಿ, ಹುಬ್ಬಳ್ಳಿ:
ಪಾದಯಾತ್ರೆ ತಡೆಯಲು ಸರ್ಕಾರ ಅಸಮರ್ಥವಾಗಿಲ್ಲ. ಕಾನೂನಿನ ಪ್ರಕಾರ ಏನು ಕ್ರಮಕೈಗೊಳ್ಳಬೇಕು ಗೃಹ ಸಚಿವರು ಕೈಗೊಳ್ಳುತ್ತಾರೆ ಎಂದು ಶಾಸಕ ಜಗದೀಶ್ ಶೆಟ್ಟರ್ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಗೃಹ ಸಚಿವರು ಪೊಲೀಸ್ ಅಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ ಎಂದರು.
ರಾಜಕಾರಣಕ್ಕಾಗಿ ಪಾದಯಾತ್ರೆ ಮಾಡುತ್ತಿದ್ದಾರೆ. ನಿಜವಾಗಲೂ ಕಾಂಗ್ರೆಸ್ ನವರಿಗೆ ಸಮಾಜದ ಬಗ್ಗೆ ಜನಸಾಮಾನ್ಯರ ಆರೋಗ್ಯದ ಬಗ್ಗೆ ಕಾಳಜಿ ಇದಿದ್ದರೆ ಈ ರೀತಿ ಮಾಡುತ್ತಿರಲಿಲ್ಲ. ಪ್ರತಿಷ್ಠೆಯಾಗಿ ತೆಗೆದುಕೊಂಡು ಸಾವಿರ ಜನರನ್ನು ತೊಡಗಿಸಿಕೊಂಡು ಪಾದಯಾತ್ರೆ ಮಾಡುವುದನ್ನು ಕೈಬಿಡಬೇಕು. ಸರ್ಕಾರದ ಜೊತೆ ಚರ್ಚಿಸಿ ಸೂಕ್ತವಾದ ಸಲಹೆ ಸೂಚನೆ ನೀಡಿ ಕಾನೂನಾತ್ಮಕವಾಗಿ ಸಮಸ್ಯೆ ಪರಿಹರಿಸಿಕೊಳ್ಳಲು ಸಹಕರಿಸಬೇಕು ಎಂದು ತಿಳಿಸಿದರು.
ಕೊರೋನಾ ಪ್ರತಿದಿನ ಹೆಚ್ಚಾಗುತ್ತಿದೆ ಇಂತಹ ಸಮಯದಲ್ಲಿ ಯಾಕೆ ವಿರೋಧ ಪಕ್ಷದವರು ಹಠ ಮಾಡುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ. ಜನರ ಆರೋಗ್ಯ ದೃಷ್ಟಿಯಿಂದ ಕಾನೂನು ಉಲ್ಲಂಘನೆ ಮಾಡುವುದು ಬೀಡಬೇಕು ಎಂದು ವಿನಂತಿಸಿದರು.
ಕೋವಿಡ್ ನಿಯಮ ಜಾರಿಗೆ ಬಂದಮೇಲೆ ಬಿಜೆಪಿ ನಾಯಕರು ಯಾರು ಉಲ್ಲಂಘನೆ ಮಾಡಲಿಲ್ಲ. ಯಾರೇ ನಿಯಮ ಉಲ್ಲಂಘಿಸಿದರೆ ಸೂಕ್ತ ಕ್ರಮ ಸರ್ಕಾರ ಕೈಗೊಳ್ಳುತ್ತದೆ ಎಂದರು.