ಹೊಸದಿಗಂತ ವರದಿ,ಕಲಬುರಗಿ:
ಶೃಂಗೇರಿ ಜಗದ್ಗುರು ವಿಧುಶೇಖರ ಭಾರತೀ ಸ್ವಾಮೀಜಿ ಅವರ ಅದ್ಧೂರಿ ಶೋಭಾಯಾತ್ರೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಭಾನುವಾರ ಸಂಜೆ ಜರುಗಿತು. ನಗರದ ಸರ್ದಾರ್ ವಲ್ಲಭಭಾಯ್ ಪಟೇಲ್ ವೃತ್ತದಿಂದ ಆರಂಭವಾದ ಶೋಭಾಯಾತ್ರೆ ನೂತನ ವಿದ್ಯಾಲಯ ಸಂಸ್ಥೆಯ ಸತ್ಯಪ್ರಮೋದತೀರ್ಥ ಸಭಾ ಮಂಟಪದವರೆಗೆ ಮಂಗಳವಾದ್ಯ, ಪೂರ್ಣಕುಂಭ ಸ್ವಾಗತದೊಂದಿಗೆ ಶ್ರೀಗಳ ಭವ್ಯ ಶೋಭಾಯಾತ್ರೆ ನಡೆಯಿತು.
ಧೂಳಿ ಪಾದಪೂಜೆ, ವೇದಘೋಷ, ಪ್ರಾರ್ಥನೆ, ಶ್ರೀಗಳಿಗೆ ಪೌರಸನ್ಮಾನ, ಶ್ರೀಗಳಿಂದ ಆರ್ಶೀವರ್ಚನ, ನೂತನ ವಿದ್ಯಾಲಯ ಶ್ರೀ ದತ್ತಾತ್ರೇಯ ಹೇರೂರ ರಂಗಮಂದಿರದಲ್ಲಿ ಭಕ್ತರಿಗೆ ಪ್ರಸಾದ ವಿತರಣೆ ಹಾಗೂ ಸಂಗಮೇಶ್ವರ ಕಾಲೋನಿಯಲ್ಲಿರುವ ಶಂಕರಮಠದಲ್ಲಿ ಚಂದ್ರಮೌಳೀಶ್ವರ ಪೂಜೆ ಜರುಗಿತು.
ಇನ್ನೂ ನಾಳೆ ಮಾ.17 ರಂದು ಬೆಳಗ್ಗೆ ಉದನೂರ ರಸ್ತೆಯಲ್ಲಿ ಭಾರತೀ ತೀರ್ಥ ವಿದ್ಯಾರ್ಥಿ ವಸತಿ ನಿಲಯದ ಶಿಲಾನ್ಯಾಸ ಕಾರ್ಯಕ್ರಮ. ಶ್ರೀಗಳ ದರ್ಶನ, ಮಂತ್ರಾಕ್ಷತೆ, ಭಕ್ತಾದಿಗಳಿಂದ ಪಾದುಕಾಪೂಜೆ, ಭಿಕ್ಷಾವಂದನೆ, ವಸಕಾಣಿಕೆ, ಲಸಮರ್ಪಣೆ ಜರುಗಲಿದೆ. ಯಾಜ್ಞವಲ್ಕ್ಯ ಸಭಾಭವನದಲ್ಲಿ ಪ್ರಸಾದ ವ್ಯವಸ್ಥೆ ಹಾಗೂ ನೂತನ ವಿದ್ಯಾಲಯ ಆವರಣದಲ್ಲಿ ಭಕ್ತರಿಂದ ಕಲ್ಯಾಣವೃಷ್ಠಿ ಸ್ತವ ಪಾರಾಯಣ ಸಮರ್ಪಣೆ, ಶ್ರೀಗಳಿಂದ ಆರ್ಶೀವರ್ಚನ ಹಾಗೂ ಶಂಕರ ಮಠದಲ್ಲಿ ಚಂದ್ರಮೌಳೀಶ್ವರ ಪೂಜೆ ನಡೆಯಲಿದೆ.
ಮೂರನೇ ದಿನ ಮಾ.18 ರಂದು ಬೆಳಗ್ಗೆ 9 ಗಂಟೆಗೆ ವಿಧುಶೇಖರಭಾರತೀ ಸ್ವಾಮೀಜಿಯ ದರ್ಶನ, ಮಂತ್ರಾಕ್ಷತೆ, ಭಕ್ತಾದಿಗಳಿಂದ ಪಾದುಕಾಪೂಜೆ ಭಿಕ್ಷಾವಂದನೆ, ವಸಕಾಣಿಕೆ ಹಾಗೂ ಸಂಜೆ ಶ್ರೀಗಳಿಗೆ ಭಕ್ತಿಪೂರ್ವಕವಾಗಿ ಬೀಳ್ಕೊಡುಗೆ ಮಾಡಲಾಗುವುದು ಎಂದು ಶೃಂಗೇರಿ ಮಠದ ವಿಶೇಷ ಪ್ರತಿನಿಧಿ ತಿಳಿಸಿದರು.