ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರ ರಾಜಕೀಯ ಹೈಡ್ರಾಮಾಕ್ಕೆ ಜುಲೈ 20ರಂದು ಸುಪ್ರೀಂಕೋರ್ಟ್ನಲ್ಲಿ ಅಂತ್ಯ ಹಾಡುವ ಲಕ್ಷಣಗಳು ಕಾಣುತ್ತಿದೆ.
ಹೌದು, ಶಿವಸೇನೆ ಶಾಸಕರ ಅನರ್ಹತೆ ಕುರಿತ ವಿಚಾರಣೆಯನ್ನು ಸುಪ್ರೀಂಕೋರ್ಟ್ ಜುಲೈ 20ರಂದು ಕೈಗೆತ್ತಿಕೊಳ್ಳಲಿದೆ. ಆ ದಿನ ಈ ರಾಜಕೀಯ ಆಟ ಮುಗಿಯು ಲಕ್ಷಣ ಗೋಚರಿಸುತ್ತಿದೆ.
ಶಿವಸೇನೆ, ಎನ್ಸಿಪಿ ಮತ್ತು ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟದ ಸರ್ಕಾರದ ವಿರುದ್ಧ ಶಿವಸೇನೆಯ ಪ್ರಬಲ ನಾಯಕ, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂದೆ ಬಣದ ಶಾಸಕರು ಬಂಡಾಯ ಸಾರಿದ್ದರು. ಹೀಗಾಗಿ ಮುಖ್ಯಮಂತ್ರಿಯಾಗಿದ್ದ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಸರ್ಕಾರ ಪತನವಾಗಿತ್ತು.
ಬಳಿಕ ತಮ್ಮ ವಿರುದ್ಧ ಬಂಡಾಯ ಸಾರಿದ್ದ ಶಾಸಕರ ಅನರ್ಹತೆಗಾಗಿ ಶಿವಸೇನೆಯ ಉದ್ಧವ್ ಠಾಕ್ರೆ ಬಣ ಅಂದಿನ ಉಪ ಸ್ಪೀಕರ್ ಮೂಲಕ ನೋಟಿಸ್ ಜಾರಿ ಮಾಡಿತ್ತು. ಆದರೆ, ಇದನ್ನು ಪ್ರಶ್ನಿಸಿ ಏಕನಾಥ್ ಶಿಂದೆ ಬಣ ಸುಪ್ರೀಂಕೋರ್ಟ್ ಮೊರೆ ಹೋಗಿದೆ. ಅಲ್ಲದೇ, ಮೂಲ ಶಿವಸೇನೆ ನಮ್ಮದೇ ಆಗಿದ್ದು, ಉದ್ಧವ್ ಬಣದ ಶಾಸಕರನ್ನು ಅನರ್ಹಗೊಳಿಸಬೇಕೆಂದು ಶಿಂದೆ ಬಣ ಕೋರಿದೆ. ಇತ್ತ, ಉದ್ಧವ್ ಬಣವು ಶಿಂದೆ ನೇತೃತ್ವದ ಸರ್ಕಾರ ರಚನೆಗೆ ರಾಜ್ಯಪಾಲರು ಅನುಮತಿ ಕೊಟ್ಟಿರುವುದನ್ನು ಪ್ರಶ್ನಿಸಿದೆ.
ಈ ಎರಡು ಬಣಗಳ ಅರ್ಜಿಗಳುಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ, ನ್ಯಾಯಮೂರ್ತಿಗಳಾದ ಕೃಷ್ಣ ಮುರಾರಿ ಮತ್ತು ಹಿಮಾ ಕೊಹ್ಲಿ ನೇತೃತ್ವದ ನ್ಯಾಯ ಪೀಠ ವಿಚಾರಣೆ ನಡೆಸಲಿದೆ.