ಹೊಸದಿಗಂತ ವರದಿ, ಕಲಬುರಗಿ:
ಗುಜರಾತ್ ನಲ್ಲಿ ಕಾಂಗ್ರೆಸ್ ಸೇರಿ ವಿರೋಧ ಪಕ್ಷಗಳ ಶಕ್ತಿ ಕುಂದಿರುವುದರಿಂದ ಬಿಜೆಪಿ ಗೆದ್ದಿದೆ, ಹೀಗಾಗಿ ಅದು ಬಿಜೆಪಿ ಸಾಧನೆ ಅಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುಜರಾತ್ ಫಲಿತಾಂಶ ರಾಜ್ಯಕ್ಕೆ ದಿಕ್ಸೂಚಿ ಆಗಲಾರದು, ಗುಜರಾತ್ ರಾಜಕಾರಣವೇ ಬೇರೆ ಕರ್ನಾಟಕ ರಾಜಕಾರಣವೇ ಬೇರೆ, ಹೀಗಾಗಿ ಅಲ್ಲಿಯ ಫಲಿತಾಂಶ ನೋಡಿ ಕನ್ನಡಿಗರು ಮತ ಹಾಕುವುದಿಲ್ಲ ಎಂದರು.
ಗುಜರಾತ್ ನಲ್ಲಿ ಆಪ್ ಗೆ ಬಿಜೆಪಿ ಪಂಡಿಗ್ ಮಾಡಿದೆ ಅನ್ನುವ ಸಿದ್ದರಾಮಯ್ಯ ಆರೋಪದ ಬಗ್ಗೆ ಪ್ರತಿಕ್ರಿಯಿಸಿ, ಆ ಬಗ್ಗೆ ಲಘುವಾಗಿ ಮಾತನಾಡಲಾರೆ, ಅದು ಬಿಜೆಪಿ ಬಿ ಟೀಮ್ ಅಂತ ನಾನು ಹೇಳುವುದಿಲ್ಲ. ಈ ಹಿಂದೆ ಕಾಂಗ್ರೆಸ್ ನವರು ಜೆಡಿಎಸ್ ನ್ನು ಬಿಜೆಪಿಯ ಬಿ ಟೀಮ್ ಅಂದಿದ್ದರು.
ಕಾಂಗ್ರೆಸ್ ನಲ್ಲಿ ನಾಯಕತ್ವದ ಕೊರತೆ ಇದೆ.
ಅದನ್ನು ಬೇರೆಯವರ ಮೇಲೆ ಹಾಕಿ, ಅವರಿಂದ ನಮಗೆ ತೊಂದರೆ ಆಯ್ತು ಅನ್ನುವುದು ಸರಿಯಲ್ಲ ಎಂದರು.
ರಾಜ್ಯದಲ್ಲಿ ನರೇಂದ್ರ ಮೋದಿ ಅವರ ಮ್ಯಾಜಿಕ್ ನಡೆಯಲ್ಲ. ಈಗಾಗಲೇ ರಾಜ್ಯದ ಜನರಿಗೆ ಮೋದಿ ಮ್ಯಾಜಿಕ್ ಬಗ್ಗೆ ಗೊತ್ತಾಗಿದೆ. ಮೋದಿ ಅವರು ಬರಿ ಆಕಾಶ ತೋರಿಸಿ ಹೋಗ್ತಾರೆ ಎಂದು ಕುಟುಕಿದರು
ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರವಾಗಿ ಮಾತನಾಡಿ, ಸಿಎಂ ಬದಲಾವಣೆ ಆಗುತ್ತಾರೆಯೋ ಅಥವಾ ಅವರೆ ಮುಂದುವರಿತಾರೋ ಎನ್ನುವುದು ನನಗೆ ಸಂಬಂಧ ಪಟ್ಟ ವಿಷಯ ಅಲ್ಲ. ಅದು ಅವರ ಪಕ್ಷದ ಆಂತರಿಕ ವಿಚಾರ ಎಂದರು.