ಹೊಸದಿಗಂತ ವರದಿ,ಮಂಗಳೂರು:
ಉಡುಪಿ ನಗರದಲ್ಲಿ ಬುಧವಾರ ಸಂಜೆ ಗುಂಡಿನ ಸದ್ದು ಕೇಳಿಸಿದೆ.
ನೆಲಮಂಗಲದಲ್ಲಿ ನಡೆದ ದರೋಡೆ ಪ್ರಕರಣವೊಂದರ ಆರೋಪಿ ಇಸಾಕ್ ಗೆ ಗುಂಡೇಟು ತಗುಲಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಳೆದ ಕೆಲವು ದಿನಗಳಿಂದ ಆರೋಪಿ ಇಸಾಕ್ ನನ್ನು ಪೊಲಿಸರು ಬೆನ್ನತ್ತಿ ಕೊನೆಗೂ ಬಂಧಿಸಿದ್ದರು. ಕೆಲವು ದಿನಗಳ ಹಿಂದೆ ಪೊಲೀಸರ ಕೈಯಿಂದ ಕೂದಲೆಳೆ ಅಂತರದಲ್ಲಿ ಪರಾರಿಯಾಗಿದ್ದ ಈತ ಇಂದು ಹಿರಿಯಡಕದಲ್ಲಿ ಪೊಲಿಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ವೇಳೆ ಕಾಲಿಗೆ ಗುಂಡೇಟು ಬಿದ್ದಿದೆ.
ಸದ್ಯ ಆತನನ್ನು ಖಾಸಗಿ ಆಸ್ಪತ್ರೆ ಯೊಂದರಲ್ಲಿ ದಾಖಲಿಸಿ ಪೊಲೀಸ್ ನಿಗಾದಲ್ಲಿ ಚಿಕಿತ್ಸೆಗೊಳಪಡಿಸಲಾಗಿದೆ.
ಇಸಾಕ್ ಬಂಧನ ವೇಳೆ ಇಬ್ಬರು ಪಿಎಸ್ ಐ, ಓರ್ವ ಸಿಬ್ಬಂದಿಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ಆರೋಪಿ ಇಸಾಕ್ ಗರುಡ ಗ್ಯಾಂಗ್ ಸದಸ್ಯ ಎನ್ನಲಾಗಿದ್ದು, ನೆಲಮಂಗಲ ಪ್ರಕರಣ ಸಹಿತ ಹಲವು ಕೃತ್ಯಗಳಲ್ಲಿ ಈತ ಪೊಲೀಸರಿಗೆ ಬೇಕಾಗಿದ್ದಾನೆ.
ಕೆಲವು ದಿನಗಳ ಹಿಂದಷ್ಟೇ ಈತ ಉಡುಪಿಗೆ ಬಂದಿರುವ ಮಾಹಿತಿ ಪಡೆದ ಪೊಲೀಸರು ಅಮದು ಬಂಧನಕ್ಕೆ ಬಲೆ ಬೀಸಿದ್ದರು. ಈ ವೇಳೆ ಇತನನ್ನು ಬಲೆಗೆ ಕೆಡವಲು ಸಿನಿಮೀಯ ಶೈಲಿಯಲ್ಲಿ ಚೇಸಿಂಗ್ ನಡೆಸಿದರೂ ಈತ ಸರಣಿ ಅಪಘಾತ ನಡೆಸಿ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದ.
ಈ ವೇಳೆ ಈತನ ಜೊತೆಗಿದ್ದ ಗೆಳತಿ ಎನ್ನಲಾದ ಯುವತಿ ಹಾಗೂ ಆಕೆಯ ತಾಯಿಯನ್ನು ಪೊಲೀಸರು ಬಂಧಿಸಿ ಈತನಿಗಾಗಿ ಬಲೆ ಬೀಸಿದ್ದರು.