ದಿಗಂತ ವರದಿ ಶಿವಮೊಗ್ಗ :
ಜಿಲ್ಲೆಗೆ ಮತ್ತೊಂದು ಕೇಂದ್ರ ಸರ್ಕಾರದ ಪ್ರಶಸ್ತಿಯ ಗರಿ ಮೂಡಿದೆ. ಸಮೀಪದ ಮತ್ತೂರು-ಹೊಸಳಿಯ ಹಿರಿಯ ಗಮಕ ಕಲಾವಿದ ಎಚ್. ಆರ್.ಕೇಶವಮೂರ್ತಿ ಅವರಿಗೆ ಕೇಂದ್ರ ಸರ್ಕಾರದ ಪದ್ಮಶ್ರೀ ಪ್ರಶಸ್ತಿ ಘೋಷಣೆಯಾಗಿದೆ. ಅವರಿಗೆ ಕಲಾ ವಿಭಾಗದಲ್ಲಿ ಪ್ರಶಸ್ತಿ ಲಭಿಸಿರುವುದು ಹೆಮ್ಮೆ ತಂದಿದೆ ಎಂದು ಸಂಸದ ಬಿ. ವೈ. ರಾಘವೇಂದ್ರ ತಿಳಿಸಿದ್ದಾರೆ.
ಸಂಸ್ಕೃತ ಗ್ರಾಮ ಮತ್ತೂರು ಶಿವಮೊಗ್ಗ ಜಿಲ್ಲೆಯ ಗಮಕ ಕಾರ್ಯಕ್ರಮದ ಚಟುವಟಿಕೆಗಳಿಂದಾಗಿ ಗಮಕ ಗ್ರಾಮ ಎಂದೇ ಗುರುತಿಸಿಕೊಂಡಿದೆ. 88 ವರ್ಷದ ಕೇಶವಮೂರ್ತಿ ಅವರು ಗಮಕ ಕ್ಷೇತ್ರದಲ್ಲಿ ಪರಿಣಿತರು. ಹೊಸಹಳ್ಳಿಯಲ್ಲಿರುವ ಗಮಕ ಕಲಾ ಪರಿಷತ್ ನಿಂದ (ಗಮಕ ಆರ್ಟ್ ಅಕಾಡೆಮಿ) ಲಭ್ಯವಿರುವ ಗಮಕದ ಹಾಡುಗಳಲ್ಲಿ ಕಾಣಿಸಿಕೊಂಡ ಕಲಾವಿದರಲ್ಲಿ ಒಬ್ಬರು. ಎಚ್.ಆರ್.ಕೇಶವಮೂರ್ತಿ, ಮತ್ತೂರು ಕೃಷ್ಣಮೂರ್ತಿ, ಮಾರ್ಕಂಡೇಯ ಅವಧಾನಿಗಳು ಗಮಕ ಕಲೆಗೆ ಸಲ್ಲಿಸಿದ ಸೇವೆಗೆ ಅನೇಕ ಪ್ರಶಸ್ತಿಗಳು ಲಭಿಸಿವೆ. ಇದೀಗ ಮತ್ತೊಂದು ಗರಿ ಮೂಡಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.