ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಶಾಲೆಯಿಂದ ಮನೆಗೆ ಹಿಂದಿರುಗದೆ ನಾಪತ್ತೆಯಾಗಿದ್ದ ಆಲಂಕಾರಿನ ಖಾಸಗಿ ಶಾಲೆಯ 6ನೇ ತರಗತಿಯ ವಿದ್ಯಾರ್ಥಿನಿಯನ್ನು ಕೊಂಬಾರಿನಲ್ಲಿ ಪತ್ತೆ ಮಾಡಿದ ಕಡಬ ಪೊಲೀಸರು ಆಕೆಯನ್ನು ಹೆತ್ತವರಿಗೆ ಒಪ್ಪಿಸಿದ ಘಟನೆ ಶನಿವಾರ ರಾತ್ರಿ ಸಂಭವಿಸಿದೆ.
ಶನಿವಾರ ಶಾಲೆ ಬಿಟ್ಟು ಬಸ್ನಲ್ಲಿ ಬಲ್ಯ ಗ್ರಾಮದ ತನ್ನ ಮನೆಗೆಂದು ಹೊರಟಿದ್ದ ಬಾಲಕಿ ಬಲ್ಯದಲ್ಲಿ ಬಸ್ಸಿನಿಂದ ಇಳಿಯದೆ ನಾಪತ್ತೆಯಾಗಿದ್ದಳು. ಬಾಲಕಿ ಮನೆಗೆ ಬಾರದೇ ಇದ್ದುದರಿಂದ ಗಾಬರಿಗೊಂಡ ಮನೆಯವರು ಹುಡುಕಾಟ ಆರಂಭಿಸಿದ್ದರು. ಬಾಲಕಿ ನಾಪತ್ತೆಯಾಗಿರುವ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲೆಡೆ ಹರಿದಾಡಿತ್ತು. ಸುದ್ದಿ ತಿಳಿದ ಕಡಬ ಪೊಲೀಸರು ಬಾಲಕಿಯನ್ನು ಪತ್ತೆ ಮಾಡಲು ಸಹಕರಿಸುವಂತೆ ಸಾಮಾಜಿಕ ಜಾಲತಾಣಗಳ ಮುಖಾಂತರ ಸಾರ್ವಜನಿಕರಲ್ಲಿ ವಿನಂತಿಸಿದ್ದರು.
ರಾತ್ರಿ ವೇಳೆಗೆ ಬಾಲಕಿಯು ಕೊಂಬಾರಿನ ಅಂಗಡಿಮಜಲು ರಾಮಣ್ಣ ಗೌಡ (55) ಎಂಬಾತನ ಮನೆಯಲ್ಲಿ ಪತ್ತೆಯಾಗಿದ್ದಾಳೆ. ಆಲಂಕಾರಿನಿಂದ ಬಂದು ಕಡಬದಲ್ಲಿ ಬಸ್ಸಿನಿಂದ ಇಳಿದು ಗಾಬರಿಯಿಂದ ಆಳುತ್ತಾ ನಿಂತಿದ್ದ ಬಾಲಕಿಯನ್ನು ರಾಮಣ್ಣ ಗೌಡ ತನ್ನ ಮನೆಗೆ ಕರೆದೊಯ್ದಿದ್ದ ಎನ್ನುವ ವಿಚಾರ ತನಿಖೆಯ ವೇಳೆ ತಿಳಿದುಬಂದಿದೆ. ರಾಮಣ್ಣ ಗೌಡನನ್ನು ಬಂಧಿಸಿರುವ ಪೊಲೀಸರು ಆತನ ವಿರುದ್ಧ ಅಪಹರಣ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.