ಹೊಸ ದಿಗಂತ ವರದಿ, ಹಂಪಿ (ಗಾಯತ್ರಿಪೀಠ):
ಪ್ರವಾಸಿಗರ ಅನುಕೂಲಕ್ಕಾಗಿ ಉತ್ತರ ಕರ್ನಾಟಕದಲ್ಲಿ ಹಂಪಿ ಸರ್ಕಿಟ್ ಮತ್ತು ದಕ್ಷಿಣ ಕರ್ನಾಟಕದಲ್ಲಿ ಮೈಸೂರನ್ನು ಸರ್ಕಿಟ್ ಆಗಿ ಶೀಘ್ರ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು.
ಹಂಪಿಯ ಗಾಯತ್ರಿ ಪೀಠದ ವೇದಿಕೆಯಲ್ಲಿ ವೈಭವದ ಹಂಪಿ ಉತ್ಸವಕ್ಕೆ ಶುಕ್ರವಾರ ಸಂಜೆ ಚಾಲನೆ ನೀಡಿ ಮಾತನಾಡಿದರು. ಇದರಿಂದ ದೇಶ, ವಿದೇಶಗಳಿಂದ ಬರುವ ಪ್ರವಾಸಿಗರಿಗೆ ಅನುಕೂಲವಾಗಲಿದೆ, ಒಂದೇ ಟಿಕೇಟ್ ಪಡೆದು ಎಲ್ಲ ಪ್ರೇಕ್ಷಣೀಯ ಪ್ರವಾಸಿ ತಾಣಗಳನ್ನು ವೀಕ್ಷಿಸಬಹುದು ಎಂದರು. ಹಂಪಿ ಇನ್ನೂ ಅಭಿವೃದ್ದಿಯಾಗಬೇಕಿದೆ, ಕೇಂದ್ರ ಪುರಾತತ್ವ ಇಲಾಖೆ ಅನುಮತಿ ಪಡೆದು ಮಾದರಿ ರೀತಿಯಲ್ಲಿ ಅಭಿವೃದ್ಧಿ ಪಡಿಸಲಾಗುವುದು. ಶ್ರೀ ಹನುಮನ ಜನ್ಮಸ್ಥಳ ಅಂಜನಾದ್ರಿ ಬೆಟ್ಟದ ಸಮಗ್ರ ಅಭಿವೃದ್ಧಿಗಾಗಿ ಎರಡು ವಾರದಲ್ಲೇ 120ಕೋಟಿ ರೂ.ಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು. ರೋಪ್ ವೇ,ರಸ್ತೆ ನಿರ್ಮಾಣ ಸೇರಿ ಅಗತ್ಯ ಸೌಕರ್ಯಗಳನ್ನು ಕಲ್ಪಿಸಲಾಗುವುದು ಎಂದರು.
ಹಂಪಿ ಉತ್ಸವವು ಕನ್ನಡ ನಾಡಿನ ಗತವೈಭವ ಬಿಂಬಿಸುವ ಉತ್ಸವ. ಕನ್ನಡ ನಾಡನ್ನಾಳಿದ ಪ್ರಮುಖ ಸಾಮ್ರಾಜ್ಯಗಳಲ್ಲಿ ಒಂದಾಗಿರುವ ಮತ್ತು ಇಡೀ ಭಾರತದ ಚರಿತ್ರೆಯಲ್ಲಿಯೇ ಪ್ರಮುಖ ಬದಲಾವಣೆ ತಂದಿರುವುದು ವಿಜಯನಗರ ಸಾಮ್ರಾಜ್ಯ ಇದಾಗಿದೆ.
ಗತವೈಭವ ಬಿಂಬಿಸುವ ಸಂಭ್ರಮದ ಉತ್ಸವ ಹಂಪಿ ಉತ್ಸವ ಎಂ.ಪಿ.ಪ್ರಕಾಶ್ ಅವರ ಕಾಲದಲ್ಲಿ ಆರಂಭವಾಯಿತು. ಪ್ರಥಮ ಹಂಪಿ ಉತ್ಸವದಲ್ಲಿ ಭಾಗವಹಿಸಿದ್ದೆ, ಇಲ್ಲಿವರೆಗೆ ವಿಜೃಂಭಣೆಯಿಂದ ವೈಭವದ ಹಂಪಿ ಉತ್ಸವ ಆಚರಣೆಗೆ ಸಚಿವರಾದ ಆನಂದಸಿಂಗ್,ಶ್ರೀರಾಮುಲು ಕಾರಣೀಕರ್ತರು ಎಂದರು.
ವಿಜಯನಗರ ಸಾಮ್ರಾಜ್ಯದ ಪುಣ್ಯಭೂಮಿ ಈ ಪ್ರದೇಶವಾಗಿದೆ.ಇಲ್ಲಿನ ಒಂದೊಂದು ಶಿಲೆಗಳು ಒಂದೊಂದು ರೋಮಾಂಚನಕಾರಿ ಕಥೆಗಳನ್ನು ಹೇಳುತ್ತವೆ;ಈ ಮೂಲಕ ಇತಿಹಾಸ ಗತವೈಭವ ಸಾರುತ್ತಿವೆ ಎಂದರು.
ಕೋವಿಡ್ ನಂತರ ಹಾಗೂ ಜಿಲ್ಲೆ ರಚನೆಯಾದ ನಂತರ ನಡೆಯುತ್ತಿರುವ ಹಂಪಿ ಉತ್ಸವ ಯಶಸ್ವಿಯಾಗಿ ನಡೆಯಲಿ ಮತ್ತು ಕಲೆ,ಸಂಸ್ಕ್ರತಿ, ಪರಂಪರೆ,ಇತಿಹಾಸ ಬಿಂಬಿಸಲಿ ಎಂದರು.
ಶಿಕ್ಷಣಕ್ಕೆ ಆದ್ಯತೆ ನೀಡಲಾಗುತ್ತಿದೆ. ವಿಜ್ಞಾನ-ತಂತ್ರಜ್ಞಾನ,ಕೌಶಲ್ಯಕ್ಕೆ ವಿಶೇಷ ಒತ್ತು ನೀಡಲಾಗುತ್ತಿದೆ. 5ಲಕ್ಷ ಯುವಕ, ಯುವತಿಯರಿಗೆ ಸ್ವಯಂ ಉದ್ಯೋಗಕ್ಕಾಗಿ ಯೋಜನೆಗಳನ್ನು ರೂಪಿಸಲಾಗಿದೆ. 6ಸಾವಿರ ಕಿ.ಮೀ ರಾಷ್ಟ್ರೀಯ ಹೆದ್ದಾರಿ,3ಸಾವಿರ ಕಿ.ಮೀ ರಾಜ್ಯ ಹೆದ್ದಾರಿ ನಿರ್ಮಿಸಲು ಕ್ರಮಕೈಗೊಳ್ಳಲಾಗಿದೆ. 8 ಬಂದರುಗಳ ಆಧುನೀಕರಣ, 02 ಬಂದರುಗಳ ವಿಸ್ತರಣೆ,ರೈಲ್ವೆ ಯೋಜನೆಗಳಿಗೆ ಒತ್ತು ನೀಡಲಾಗುತ್ತಿದೆ ಎಂದರು.
8ಲಕ್ಷ ಕೋಟಿ ರೂ.ಹೂಡಿಕೆ ಈ ವರ್ಷ ಬರುವ ನಿರೀಕ್ಷೆ ಇದ್ದು;ಒಪ್ಪಂದ ಮಾಡಿಕೊಳ್ಳಲಾಗಿದೆ.ಉದ್ಯೋಗಗಳು ಹರಿದುಬರಲಿವೆ ಎಂದರು. ಈ ಸಂದರ್ಭದಲ್ಲಿ ಸಚಿವರಾದ ಆನಂದ್ ಸಿಂಗ್, ಶಶಿಕಲಾ ಜೊಲ್ಲೆ, ಶ್ರೀರಾಮುಲು, ಹಾಲಪ್ಪ ಬಸಪ್ಪ ಆಚಾರ್, ಸಂಸದರಾದ ದೇವೇಂದ್ರಪ್ಪ, ಕರಡಿ ಸಂಗಣ್ಣ, ಶಾಸಕರಾದ ಗೋಪಾಲಕೃಷ್ಣ, ಪರಣ್ಣ ಮುನವಳ್ಳಿ, ಜಿಲ್ಲಾಧಿಕಾರಿ ಟಿ.ವೆಂಕಟೇಶ, ಎಸ್ಪಿ ಶ್ರೀದರ ಬಾಬು, ಅಶೋಕ್ ಜೀರೆ, ನಗರಸಭೆ ಅಧ್ಯಕ್ಷೆ ಸುಂಕಮ್ಮ ಸೇರಿದಂತೆ ಇತರರಿದ್ದರು.