ಹೊಸ ದಿಗಂತ ವರದಿ, ಮೈಸೂರು:
ಈ ಬಾರಿಯ ನಾಡ ಹಬ್ಬ ಮೈಸೂರು ದಸರಾ ಉದ್ಘಾಟಕರಾದ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರು, ಶನಿವಾರ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನಲ್ಲಿರುವ ಸುತ್ತೂರು ಮಠಕ್ಕೆ ಭೇಟಿ ನೀಡಿ, ಮಠದ ಪೀಠಾಧಿಪತಿಗಳಾದ ಶ್ರೀ ಶಿವರಾತ್ರಿದೇಶಿಕೇಂದ್ರ ಸ್ವಾಮಿಯವರ ಆಶೀರ್ವಾದ ಪಡೆದರು.
ಮಠಕ್ಕೆ ಕುಟುಂಬ ಸಮೇತ ಭೇಟಿ ನೀಡಿದ ಹಂಸಲೇಖ ಅವರಿಗೆ ಪೂರ್ಣಕುಂಭ,ವಾದ್ಯಗೋಷ್ಠಿ ಮೂಲಕ ಸ್ವಾಗತ ಕೋರಲಾಯಿತು. ಮೈಸೂರು ಜಿಲ್ಲಾಡಳಿತ ವತಿಯಿಂದಲೂ ಹಂಸಲೇಖರಿಗೆ ಸ್ವಾಗತ ಕೋರಲಾಯಿತು. ತಹಸೀಲ್ದಾರ್ ರಕ್ಷಿತ್ ಹಂಸಲೇಖರನ್ನ ಸ್ವಾಗತಿಸಿದರು. ನಂತರ ಹಂಸಲೇಖ ಅವರು ಸುತ್ತೂರು ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಹಂಸಲೇಖರನ್ನ ಶ್ರೀಗಳು ಸನ್ಮಾನಿಸಿದರು.
ಇದೇ ವೇಳೆ ಲತಾ ಹಂಸಲೇಖ ಸುತ್ತೂರು ಶ್ರೀಗಳ ಮುಂದೆ ಬಸವಣ್ಣನವರ ವಚನ ಹಾಡಿದರು. ಲತಾ ಹಂಸಲೇಖರ ವಚನಕ್ಕೆ ಹಂಸಲೇಖ ಸಂಗೀತ ನುಡಿಸಿದ್ದು ಲತಾ ಹಂಸಲೇಖರ ವಚನಕ್ಕೆ ಮಠದ ಭಕ್ತರು ಮನಸೋತರು.
ಈ ವೇಳೆ ಮಾತನಾಡಿದ ಸುತ್ತೂರು ದೇಶಿಕೇಂದ್ರ ಸ್ವಾಮಿ, ಮೈಸೂರು ದಸರಾ ಉದ್ಘಾಟನೆ ಮಾಡೋದು ಅಂದರೆ ಅದೊಂದು ಸೌಭಾಗ್ಯ. ಇಡೀ ದೇಶದಲ್ಲಿ ವಿಶ್ವ ವಿಖ್ಯಾತ ಅಂತ ಇರೋದು ಮೈಸೂರು ದಸರಾಗೆ ಮಾತ್ರ. ಹಂಸಲೇಖರ ಬಗ್ಗೆ ಎಷ್ಟು ಹೇಳಿದ್ರು ಕಮ್ಮಿನೆ. ಸಂಗೀತ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿರೋರು. ಹಂಸಲೇಖರವರು ಒಬ್ಬ ದೇಸಿ ಪ್ರತಿಭೆ. ಕಳೆದ ಭಾರಿ ರಾಷ್ಟ್ರಪತಿಗಳು ರಾಜ್ಯಪಾಲರು ಎಲ್ಲರೂ ಉದ್ಘಾಟನೆ ಮಾಡಿದ್ದಾರೆ. ಈ ಬಾರಿ ದೇಸಿಯ ಪ್ರತಿಭೆಯವರು ಉದ್ಘಾಟನೆ ಮಾಡಿರೋದು ದೇಸಿಯತೆಗೆ ಸಿಕ್ಕ ಗೌರವ. ಹಂಸಲೇಖರವರು ಇಂದು ಮಠಕ್ಕೆ ಭೇಟಿ ನೀಡಿದ್ದು ಖುಷಿಯಾಗಿದೆ ಎಂದರು.
ಜಯಚಾಮರಾಜೇಂದ್ರ ಒಡೆಯರ್ ರವರು ವಿದೇಶ ಪ್ರವಾಸ ಕೈಗೊಂಡಾಗ ಮಠಕ್ಕೆ ಭೇಟಿ ನೀಡುತ್ತಿದ್ದರು. ಮಠಕ್ಕೂ ಮೈಸೂರಿನ ಅರಮನೆಗೂ ಅವಿನಾಭಾವ ಸಂಬಂಧವಿದೆ. ಈ ಬಾರಿಯ ದಸರಾ ಮಹೋತ್ಸವ ಯಶಸ್ವಿಯಾಗಿ ನಡೆಯಲಿ ಎಂದು ಶುಭ ಹಾರೈಸಿದರು.