ದೇವಸ್ಥಾನಗಳಲ್ಲಿ ಬಿಜೆಪಿ ಕಾರ್ಯರ್ತರಿಂದ ಹನುಮಾನ್ ಚಾಲೀಸ ಪಠಿಸಲಿದ್ದು,ಬಂದು ಕೇಳಿ: ಸುರ್ಜೇವಾಲಗೆ ಶೋಭಾ ಕರಂದ್ಲಾಜೆ ಆಹ್ವಾನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬೆಂಗಳೂರು: ಚುನಾವಣೆಯಲ್ಲಿ ಗೆಲ್ಲಬೇಕೆಂದು ಹಿಂದುಗಳ ಭಾವನೆಗಳ ಜೊತೆ ಚೆಲ್ಲಾಟವಾಡುತ್ತಿರುವ ಕಾಂಗ್ರೆಸ್‍ಗೆ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕೇಂದ್ರ ಸಚಿವೆ ಹಾಗೂ ರಾಜ್ಯ ಬಿಜೆಪಿ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕಿ ಶೋಭಾ ಕರಂದ್ಲಾಜೆ ಅವರು ಹೇಳಿದ್ದಾರೆ.

ಮಲ್ಲೇಶ್ವರದ ಬಿಜೆಪಿ ಚುನಾವಣಾ ಮಾಧ್ಯಮ ಕೇಂದ್ರದಲ್ಲಿ ಇಂದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ, ಬಜರಂಗದಳದವರಿಗೆ ಹನುಮಾನ್ ಚಾಲಿಸಾ ಪಠಿಸಲು ಬರುವುದಿಲ್ಲ ಎಂದು ಕಾಂಗ್ರೆಸ್ ಮುಖಂಡ ರಣದೀಪ್ ಸುರ್ಜೇವಾಲ ಹುಡುಗಾಟದ ಹಿಂದು ವಿರೋಧಿ ಹೇಳಿಕೆ ನೀಡಿದ್ದಾರೆ. ಅವರ ಈ ಸವಾಲನ್ನು ಸ್ವೀಕರಿಸಿ ಬಿಜೆಪಿ ಕಾರ್ಯರ್ತರ ದೇವಸ್ಥಾನಗಳಲ್ಲಿ ಹನುಮಾನ್ ಚಾಲೀಸ ಪಠಿಸಲಿದ್ದಾರೆ. ತಾವು ಸಹ ಇಂದು ಮಲ್ಲೇಶ್ವರ 8ನೇ ಕ್ರಾಸ್‍ನ ಶ್ರೀರಾಮ ಮಂದಿರಲ್ಲಿ ಹನುಮಾನ್ ಚಾಲಿಸಾ ಪಠಿಸಲಿದ್ದು,. ಸುರ್ಜೆವಾಲ ಮತ್ತು ಕಾಂಗ್ರೆಸ್‍ನವರು ದೇವಸ್ಥಾನಗಳಿಗೆ ಬಂದು ಕೇಳಲಿ ಎಂದು ಆಹ್ವಾನಿಸಿದರು.

ಹನುಮನನ್ನು ನಾವು ನಂಬಿರುವುದು ಮತ್ತು ಹನುಮನ ಶಕ್ತಿ ಬಗ್ಗೆ ವಿಶ್ವಕ್ಕೇ ಗೊತ್ತು. ಕರ್ನಾಟಕ ಹನುಮ ಉದಯಿಸಿದ ನಾಡು. ಅಂಜನಾದ್ರಿ ಬೆಟ್ಟ, ಹಂಪಿ ಪ್ರದೇಶಗಳಲ್ಲಿ ಓಡಾಡಿದವರು. ಹನುಮಂತನ ಮೇಲೆ ಕನ್ನಡಿಗರಿಗಿರುವ ಭಕ್ತಿ, ಹೆಮ್ಮೆ, ಗೌರವವನ್ನು ಕದ್ದೊಯ್ಯುವ ಪ್ರಯತ್ನವನ್ನು ಕಾಂಗ್ರೆಸ್ ನವರು ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಸುರ್ಜೇವಾಲಗೆ ಆಂಜನೇಯನ ಬಗ್ಗೆ ಗೊತ್ತಿಲ್ಲ. ಆಂಜನೇಯನ ಅಪ್ಪ-ಅಮ್ಮ ಯಾರೆಂದು ಗೊತ್ತಿಲ್ಲ. ಆದರೂ ಆಂಜನೇಯನ ಶಕ್ತಿ ಬಗ್ಗೆ ಮಾತನಾಡಿ ಹಿಂದುಗಳ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಚುನಾವಣೆ, ಕುರ್ಚಿಗಾಗಿ ಏನು ಬೇಕಾದರೂ ಮಾಡಲು ಕಾಂಗ್ರೆಸ್ ಹೊರಟಿದೆ. ಹಿಂದುಗಳು ಎಲ್ಲವನ್ನೂ ಸಹಿಸಿಕೊಳ್ಳುತ್ತಾರೆ ಎಂದು ತಿಳಿದಿದೆ. ಇದೇ ಎಸ್‍ಡಿಪಿಐ ಅನ್ನು ಖುಷಿ ಪಡಿಸಲು ಕಾಂಗ್ರೆಸ್ ಇಂತಹ ಹೇಳಿಕೆಗಳನ್ನು ನೀಡುತ್ತಿದೆ. ನಿಷೇಧಿತ ಪಿಎಫ್‍ಐನವರೇ ಎಸ್‍ಡಿಪಿಐನಲ್ಲಿದ್ದಾರೆ. ಎಸ್‍ಡಿಪಿಐ ಪ್ರಣಾಳಿಕೆ, ಕಾಂಗ್ರೆಸ್ ಪ್ರಣಾಳಿಕೆಯಲ್ಲಿದೆ. ಈ ಚುನಾವಣೆಯಲ್ಲಿ ಧರ್ಮವನ್ನು ಎಳೆದುತಂದು ಕಾಂಗ್ರೆಸ್ ಕೆಟ್ಟ ರಾಜಕೀಯ ಮಾಡುತ್ತಿರುವುದನ್ನು ಬಿಜೆಪಿ ಖಂಡಿಸುತ್ತದೆ ಎಂದು ಹೇಳಿದರು.
ಬಿಜೆಪಿ, ಆರೆಸ್ಸೆಸ್‍ನ ಒಂದು ಭಾಗವಿದ್ದಂತೆ. ಅದೇ ರೀತಿ ಬಜರಂಗದಳ, ಆರೆಸ್ಸೆಸ್‍ನ ಒಂದು ಭಾಗ. ಯುವಕರಲ್ಲಿ ಶಕ್ತಿ ತುಂಬುವ ಕೆಲಸವನ್ನು ಬಜರಂಗದಳ ಮಾಡುತ್ತಿದೆ. ಧರ್ಮ, ದೇವಸ್ಥಾನಗಳನ್ನು ರಕ್ಷಿಸುವ ಕೆಲಸದಲ್ಲಿ ನಿರತವಾಗಿದೆ ಎಂದು ವಿವರಿಸಿದರು.

ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ಮಾತನಾಡಿ, ಬಿಜೆಪಿ ಡಬಲ್ ಇಂಜಿನ್ ಸರ್ಕಾರ ಸಾಧನೆಗಳ ಪಟ್ಟಿಯನ್ನು ಜನರ ಮುಂದಿಟ್ಟು ಕರ್ನಾಟಕದ ಬಗ್ಗೆ ದೂರದೃಷ್ಟಿ ಹೊಂದಿದೆ. ಆದರೆ, ಕಾಂಗ್ರೆಸ್, ತನ್ನ ಪ್ರಣಾಳಿಕೆ ಮೂಲಕ ಕೋಮು ವಿಷ ಕಾರಿದೆ. ಹನುಮನನ್ನು ಅವಮಾನಿಸಲು ಕಾಂಗ್ರೆಸ್ ಗೆ ಎಷ್ಟು ಧೈರ್ಯ? ಎಂದು ಆಕ್ಷೇಪಿಸಿದರು.

ಚುನಾವಣೆ ವೇಳೆ ಹಿಂದುಗಳ ಭಾವನೆಗಳ ಜೊತೆ ಕಾಂಗ್ರೆಸ್ ಆಟ ಆಡುತ್ತಿದೆ. ಸಹಿಷ್ಣುತೆಗೆ ಹಿಂದುಗಳು ಸುಮ್ಮನಿರಬೇಕೆ? ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಆದ ಮೇಲೆ ಹಿಂದು ಸಮುದಾಯ ಬೀದಿಗಿಳಿದು ಆಕ್ರೋಶ ವ್ಯಕ್ತಪಡಿಸುತ್ತಿದೆ. ಜನರು ದೇವಸ್ಥಾನಗಳಲ್ಲಿ ಹನುಮಾನ್ ಚಾಲಿಸಾ ಪರಾಯಣ ಮಾಡುತ್ತಿದ್ದಾರೆ ಎಂದು ಹೇಳಿದರು.

ಬಜರಂಗದಳವನ್ನು ಕಾಂಗ್ರೆಸ್ ಅಧಿಕಾರವಿರುವ ರಾಜ್ಯಗಳಲ್ಲಿ ಏಕೆ ನಿಷೇಧಿಸಿಲ್ಲ ಎಂದು ಪ್ರಶ್ನಿಸಿದ ಭಾಟಿಯಾ ಅವರು, ಕಾಂಗ್ರೆಸ್, ಜನರನ್ನು ಮೋಸಗೊಳಿಸಿ, ದಾರಿತಪ್ಪಿಸುತ್ತಿದೆ. ಚುನಾವಣೆಯಲ್ಲಿ ಕೋಮು ವಿಷ ಕಾರುತ್ತಿದೆ. ಪ್ರಗತಿಪರ ಕರ್ನಾಟಕವನ್ನು ನಾಶ ಮಾಡಲು ಬಿಜೆಪಿ ಬಿಡುವುದಿಲ್ಲ. ನರೇಂದ್ರ ಮೋದಿ, ಬಸವರಾಜ ಬೊಮ್ಮಾಯಿ, ಯಡಿಯೂರಪ್ಪ ರಾಜ್ಯದ ನಿಜವಾದ ಧ್ವನಿಯಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಮುಸ್ಲಿಮರು ಒಂದಾಗಿ ಲಿಂಗಾಯತ ಸಮುದಾಯಕ್ಕೆ ಪಾಠ ಕಲಿಸುತ್ತಾರೆ ಎಂದು ಕಾಂಗ್ರೆಸ್‍ನ ಶಾಸಕ ರಹೀಮ್ ಖಾನ್ ಹೇಳಿದ್ದಾರೆ. ಜನಪ್ರತಿನಿಧಿಯೊಬ್ಬರು ಧರ್ಮದ ಹೆಸರಿನಲ್ಲಿ ಜನರಿಗೆ ಮನವಿ ಮಾಡಿದ್ದಾರೆ. ಖರ್ಗೆ, ರಾಹುಲ್ ಗಾಂಧಿ ಅನುಮತಿ ಇಲ್ಲದೆ ಅವರು ಈ ಹೇಳಿಕೆ ನೀಡಿರಲು ಸಾಧ್ಯವಿಲ್ಲ. ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಯಲು ಚುನಾವಣಾ ಈ ಆಯೋಗ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದರು.

ನಿಷೇಧಿತ ಪಿಎಫ್‍ಐನವರು ಎಸ್‍ಡಿಪಿಐನಲ್ಲಿದ್ದಾರೆ. ಇಂತಹ ಎಸ್‍ಡಿಪಿಐನೊಂದಿಗೆ ಕಾಂಗ್ರೆಸ್ ಸಖ್ಯ ಹೊಂದಿದೆ. ಚುನಾವಣೆಗೆ ಬೆಂಬಲವನ್ನು ಪಡೆದಿದೆ ಎಂದು ಗೌರವ್ ಭಾಟಿಯಾ ಹೇಳಿದರು. ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಎಂ.ಜಿ.ಮಹೇಶ್ ಅವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!