ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಹರ್ಯಾಣ ವಿಧಾನಸಭೆ ಚುನಾವಣೆಗೆ ಆಮ್ ಆದ್ಮಿ ಪಕ್ಷದ ಯೋಜನೆಗಳು ಮತ್ತು ಏಪ್ರಿಲ್/ಮೇನಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ಮುನ್ನ ಕಾಂಗ್ರೆಸ್ನೊಂದಿಗೆ ಸಂಭಾವ್ಯ ಸೀಟು ಹಂಚಿಕೆ ಒಪ್ಪಂದಕ್ಕೆ ಈಗ ಹೊಸತೊಂದು ತೊಡಕು ಉಂಟಾಗಿದ್ದು, ಗುರುವಾರ ಎಎಪಿಯ ದಲಿತ ಮುಖಂಡ ಮತ್ತು ಪ್ರಚಾರ ಸಮಿತಿ ಮುಖ್ಯಸ್ಥ ಅಶೋಕ್ ತನ್ವರ್ ನೈತಿಕ ಭಿನ್ನತೆ ಉಲ್ಲೇಖಿಸಿ ಆಮ್ ಆದ್ಮಿ ಪಕ್ಷ ತೊರೆದಿದ್ದಾರೆ.
ಎಎಪಿ ಮುಖ್ಯಸ್ಥ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಉದ್ದೇಶಿಸಿ ಸಲ್ಲಿಸಿರುವ ರಾಜೀನಾಮೆ ಪತ್ರದಲ್ಲಿ , ‘ಪ್ರಸ್ತುತ ರಾಜಕೀಯ ಸನ್ನಿವೇಶ’ವನ್ನು ದೂಷಿಸಿದ್ದು , ಪ್ರಸ್ತುತ ರಾಜಕೀಯ ಸನ್ನಿವೇಶ ಮತ್ತು ಕಾಂಗ್ರೆಸ್ನೊಂದಿಗಿನ ನಿಮ್ಮ ಹೊಂದಾಣಿಕೆ ದೃಷ್ಟಿಯಿಂದ, ನನ್ನ ನೈತಿಕತೆಯು ನನ್ನನ್ನು ಮುಂದುವರಿಸಲು ಅನುಮತಿಸುವುದಿಲ್ಲ ಆದ್ದರಿಂದ, ನನ್ನ ರಾಜೀನಾಮೆಯನ್ನು ದಯವಿಟ್ಟು ಸ್ವೀಕರಿಸಿ ಎಂದು ತನ್ವರ್ ಬರೆದಿದ್ದಾರೆ.
ತನ್ವರ್ ಅವರ ಮುಂದಿನ ನಡೆ ಏನು ಎಂಬುದು ಸದ್ಯ ತಿಳಿದಿಲ್ಲ. 2022 ರ ಏಪ್ರಿಲ್ನಲ್ಲಿ ಕಾಂಗ್ರೆಸ್ನಿಂದ ಕೇಜ್ರಿವಾಲ್ ಅವರ ಸಮ್ಮುಖದಲ್ಲಿ ಎಎಪಿ ಸೇರ್ಪಡೆಗೊಂಡ ತನ್ವರ್, ಬಿಜೆಪಿ ಸೇರಲಿದ್ದಾರೆ ಎಂಬ ಊಹಾಪೋಹವಿದೆ. ಅವರು ತಮ್ಮ ರಾಜೀನಾಮೆ ಪತ್ರದಲ್ಲಿ ಅವರು ‘ಭಾರತ್’ ಎಂದು ಉಲ್ಲೇಖಿಸಿದ್ದರಿಂದ ಈ ವದಂತಿ ಹರಡಿದೆ.
आम आदमी पार्टी से मेरा इस्तीफा..!!@ArvindKejriwal pic.twitter.com/zzar2NLwP8
— Ashok Tanwar (@Tanwar_Indian) January 18, 2024
ಈ ದೇಶದ ಜವಾಬ್ದಾರಿಯುತ ಪ್ರಜೆಯಾಗಿ ಮತ್ತು ನನ್ನ ವಿದ್ಯಾರ್ಥಿ ದಿನಗಳಿಂದಲೂ ಸಕ್ರಿಯ ರಾಜಕಾರಣದಲ್ಲಿ ತೊಡಗಿರುವ ನಾನು ನಮ್ಮ ಸಂವಿಧಾನ, ದೇಶ ಮತ್ತು ಅದರ ಜನರ ಮೇಲೆ ಯಾವಾಗಲೂ ನಂಬಿಕೆ ಇಟ್ಟಿದ್ದೇನೆ. ನಾನು ಹರ್ಯಾಣ ರಾಜ್ಯದ ಸುಧಾರಣೆಗಾಗಿ ನಮ್ಮ ಪ್ರೀತಿಯ ದೇಶ ಭಾರತ ಮತ್ತು ಅದರ ಜನರಿಗಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತೇನೆ ಎಂದು ಹೇಳಿದ್ದಾರೆ.