ಹೊಸ ದಿಗಂತಹ ಡಿಜಿಟಲ್ ಡೆಸ್ಕ್
ಈ ಬಾರಿ ಹಾಸನ ವಿಧಾನಸಭೆ ಟಿಕೆಟ್ ಸ್ವರೂಪ್ ಅವರಿಗೆ ಕೊಡಿಸಲು ಹೆಚ್ಡಿಕೆ ಇನ್ನಿಲ್ಲದ ಕಸರತ್ತು ನಡೆಸಿದ್ದು, ಇತ್ತ ರೇವಣ್ಣ ಕುಟುಂಬ ಸಹ ಟಿಕೆಟ್ಗಾಗಿ ಪಟ್ಟು ಹಿಡಿದಿದೆ. ಇದರ ಮಧ್ಯೆ ಇದೀಗ ಟಿಕೆಟ್ ಆಕಾಂಕ್ಷಿಗಳಾದ ಎಚ್.ಪಿ.ಸ್ವರೂಪ್ ಪ್ರಕಾಶ್ ಹಾಗೂ ಹೆಚ್ಡಿ ರೇವಣ್ಣ ಭೇಟಿಯಾಗಿದ್ದು, ರಹಸ್ಯ ಮಾತುಕತೆ ನಡೆಸಿದ್ದಾರೆ. ಇದು ಹಾಸನ ಜಿಲ್ಲಾ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.
ಇಂದು ಹಾಸನದಲ್ಲಿ H.D.ರೇವಣ್ಣ ಭೇಟಿಯಾದ ಟಿಕೆಟ್ ಆಕಾಂಕ್ಷಿ ಸ್ವರೂಪ್, ಅರ್ಧಗಂಟೆಗೂ ಹೆಚ್ಚು ಮಾತುಕತೆ ನಡೆಸಿದ್ದಾರೆ. ಕಳೆದ ಒಂದು ತಿಂಗಳಿಂದ ಹಾಸನ ಟಿಕೆಟ್ ಚರ್ಚೆ ನಡುವೆ ಮೊದಲ ಬಾರಿಗೆ ಸ್ವರೂಪ್ ಹಾಗೂ ರೇವಣ್ಣ ಭೇಟಿಯಾಗಿದ್ದು, ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಮಾ.10ರಂದು ಹಾಸನ ಜಿಲ್ಲೆಯಲ್ಲಿ ಜೆಡಿಎಸ್ ಪಂಚರತ್ನ ರಥಯಾತ್ರೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ರಥಯಾತ್ರೆ ಯಶಸ್ವಿಗಾಗಿ ಎಲ್ಲರನ್ನು ಒಗ್ಗೂಡಿಸಲು ರೇವಣ್ಣ ತಂತ್ರ ರೂಪಿಸಿದ್ದಾರೆ ಎನ್ನಲಾಗಿದೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸ್ವರೂಪ್, ರೇವಣ್ಣ ಸಾಹೇಬರನ್ನು ಭೇಟಿಯಾಗಿ ವಾರ, ಹತ್ತು ದಿನ ಆಗಿತ್ತು. ಹೊಸದು ಏನಿಲ್ಲ, ಸಾಹೇಬ್ರು ನಮ್ಮ ಪಕ್ಷದ ವರಿಷ್ಠರು, ನಾಯಕರು ಜನರಲ್ ಆಗಿ ಭೇಟಿ ಮಾಡಲು ಬಂದೆ. ಪಂಚರತ್ನ ಯಾತ್ರೆ ಬಗ್ಗೆ ಕುಳಿತು ಮಾತನಾಡೋಣ ಅಂತ ಹೇಳಿದ್ದಾರೆ ಅಷ್ಟೇ. ಟಿಕೆಟ್ ವಿಚಾರ ಮಾತನಾಡಿಲ್ಲ. ಮಾತನಾಡೋಣ ಎಂದು ಹೇಳಿದ್ದಾರೆ. ದೊಡ್ಡವರೆಲ್ಲ ಕುಳಿತುಕೊಂಡು ತೀರ್ಮಾನ ಮಾಡೋಣ ಎಂದಿದ್ದಾರೆ ಎಂದು ಸ್ಪಷ್ಟಪಡಿಸಿದರು.