ಹೊಸದಿಗಂತ ಡಿಜಿಟಲ್ ಡೆಸ್ಕ್:
ನಕಲಿ ಯಕ್ಷಗಾನ ಕಲಾವಿದನನ್ನು ಅಸಲಿ ಯಕ್ಷಗಾನ ಕಲಾವಿದರೋರ್ವರು ನಿಲ್ಲಿಸಿ ವೇಷ ಕಳಚಿ ಕಳಿಸಿಕೊಟ್ಟ ವಿಶೇಷ ಪ್ರಸಂಗ ದಕ್ಷಿಣ ಕನ್ನಡ ಜಿಲ್ಲೆಯ ಬಿ.ಸಿ.ರೋಡಿನಲ್ಲಿ ಶನಿವಾರ ನಡೆದಿದೆ.
ತುಳುನಾಡಿನ ಶ್ರೇಷ್ಠ ಜಾನಪದ ಕಲೆ ಯಕ್ಷಗಾನದ ವೇಷ ಧರಿಸಿ ದಸರಾ ವೇಷವೆಂದು ಜನರಲ್ಲಿ ಭಿಕ್ಷೆ ಬೇಡುವುದನ್ನು ಆಕ್ಷೇಪಿಸಿದ ಹಿರಿಯ ಯಕ್ಷಗಾನ ಕಲಾವಿದರಾದ ಅಶೋಕ್ ಶೆಟ್ಟಿ ಸರಪಾಡಿ ಅವರು ವೇಷಧಾರಿಯ ವೇಷವನ್ನು ಆಕ್ಷೇಪಿಸಿ ನಕಲಿ ಯಕ್ಷನ ವೇಷ,ಧಿರಿಸನ್ನು ಕಳಚಿಸಿದ್ದಾರೆ.
ದಸರಾ ಹಬ್ಬದ ನೆಪದಲ್ಲಿ ದಾವಣಗೆರೆಯ ವ್ಯಕ್ತಿಯೋರ್ವ ಯಕ್ಷಗಾನದ ವೇಷ ಧರಿಸಿ ಸಾರ್ವಜನಿಕರಲ್ಲಿ ಭಿಕ್ಷೆ ಬೇಡಿ ಹಣ ಸಂಗ್ರಹ ಮಾಡುತ್ತಿದ್ದನು. ಇದನ್ನು ಗಮನಿಸಿದ ಹಿರಿಯ ಯಕ್ಷಗಾನ ಕಲಾವಿದ ಅಶೋಕ್ ಶೆಟ್ಟಿ ಸರಪಾಡಿಯವರು ವೇಷಧಾರಿಯನ್ನು ನಿಲ್ಲಿಸಿ ಯಕ್ಷಗಾನದ ವೇಷಕ್ಕೆ ತನ್ನದೇ ಆದ ಗೌರವ ಇದೆ. ಯಕ್ಷ ವೇಷ ಧರಿಸಿ ಭಿಕ್ಷೆ ಬೇಡಿ ಯಕ್ಷಗಾನ ಕಲೆಯನ್ನು ಅವಮಾನಿಸುವುದು ಸಮಂಜಸವಲ್ಲ. ತಕ್ಷಣ ವೇಷ ಕಳಚುವಂತೆ ಒತ್ತಾಯಿಸಿದ್ದಲ್ಲದೆ ವೇಷ ಕಳಚುವರೆಗೂ ಪಟ್ಟು ಹಿಡಿದರು.
ಯಕ್ಷಗಾನ ವೇಷ ಧರಿಸಿ ಭಿಕ್ಷೆ ಬೇಡುತ್ತಿದ್ದ ವ್ಯಕ್ತಿ ಕೊನೆಗೂ ಅಸಲಿ ಯಕ್ಷಗಾನ ಕಲಾವಿದರ ಪಟ್ಟಿಗೆ ಮಣಿದು ತನ್ನ ವೇಷ ಕಳಚಿ, ಕ್ಷಮೆ ಕೇಳಿದರು.