ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶದ ಮುಸ್ಲಿಂ ಮೌಲ್ವಿ ಮೌಲಾನಾ ಜಾರ್ಜಿಸ್ ಅನ್ಸಾರಿ ಅವರು ಹಿಂದೂಗಳ ಆರಾಧ್ಯ ದೈವ ಭಗವಾನ್ ಶ್ರೀಕೃಷ್ಣನ ಕುರಿತು ನೀಡಿರುವ ವಿಲಕ್ಷಣ ಹಾಗೂ ವಿವಾದಾತ್ಮಕ ಹೇಳಿಕೆಯು ತೀವ್ರ ಸ್ವರೂಪದ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.
ಜಾರ್ಖಂಡ್ನಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಮೌಲ್ವಿ, ‘ಹಿಂದೂಗಳು ಪೂಜಿಸುವ ಶ್ರೀಕೃಷ್ಣನು ಇಸ್ಲಾಮಿನ ಪ್ರವಾದಿಯಾಗಿದ್ದರು ಹಾಗೂ ಅವರು ನಿತ್ಯವೂ ಐದು ಬಾರಿ ನಮಾಜ್ ಮಾಡುತ್ತಿದ್ದರು’ ಎಂದು ಪ್ರತಿಪಾದಿಸಿದ್ದಾರೆ. ಈ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಕೋಮು ಸೌಹಾರ್ದತೆಗೆ ಧಕ್ಕೆ ತಂದಿದೆ ಎಂದು ಹಿಂದೂ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿವೆ.
ಸಿಎಂ ಯೋಗಿ ಆದಿತ್ಯನಾಥ್ ಕುರಿತು ಮೌಲ್ವಿ ಹೇಳಿಕೆ
ವಿವಾದಾತ್ಮಕ ಮೌಲ್ವಿ ಮೌಲಾನಾ ಜಾರ್ಜಿಸ್ ಅನ್ಸಾರಿ ಕೇವಲ ಶ್ರೀಕೃಷ್ಣನ ಬಗ್ಗೆ ಮಾತ್ರವಲ್ಲದೆ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕುರಿತೂ ಮಾತನಾಡಿದ್ದಾರೆ. ‘ಶ್ರೀರಾಮನ ಭಕ್ತರೆಂದು ಖ್ಯಾತರಾದ ಸಿಎಂ ಯೋಗಿ ಆದಿತ್ಯನಾಥ್ ಒಂದು ವೇಳೆ ಖುರಾನ್ ಓದಿದರೆ, ಅವರು ಇಸ್ಲಾಂ ಧರ್ಮವನ್ನು ಪ್ರೀತಿಸಲು ಪ್ರಾರಂಭಿಸುತ್ತಾರೆ’ ಎಂದು ಮೌಲ್ವಿ ಹೇಳಿಕೆ ನೀಡಿದ್ದಾರೆ.
ಲಖನೌನಲ್ಲಿ ಹಿಂದೂ ಮಹಾಸಭಾದಿಂದ ಚಪ್ಪಲಿ ಸೇವೆ
ಮೌಲಾನಾ ಈ ಉದ್ಧಟತನದ ಹೇಳಿಕೆಯ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಲಖನೌನಲ್ಲಿ ಹಿಂದೂ ಮಹಾಸಭಾದ ಕಾರ್ಯಕರ್ತರು ಬೀದಿಗಿಳಿದು ಭಾರಿ ಪ್ರತಿಭಟನೆ ನಡೆಸಿದ್ದಾರೆ. ಮೌಲ್ವಿಯ ಫೋಟೋವನ್ನು ರಸ್ತೆಗೆ ಹಾಕಿ, ಕಾಲಿನಿಂದ ತುಳಿದು ಆಕ್ರೋಶ ಹೊರಹಾಕಿದ್ದಾರೆ. ಇದೇ ವೇಳೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಮೌಲ್ವಿ ವಿರುದ್ಧ ತಕ್ಷಣವೇ ಎಫ್ಐಆರ್ ದಾಖಲಿಸಿ ಬಂಧಿಸುವಂತೆ ಹಜರತ್ಗಂಜ್ ಪೊಲೀಸ್ ಠಾಣೆಗೆ ಅಧಿಕೃತ ದೂರು ಸಲ್ಲಿಸಲಾಗಿದೆ.
ಮೌಲ್ವಿ ನಾಲಿಗೆ ಕತ್ತರಿಸಿದವರಿಗೆ 10 ಲಕ್ಷ ರೂ. ನಗದು ಬಹುಮಾನ
ಮೌಲಾನಾ ಈ ಹೇಳಿಕೆಗೆ ಅಯೋಧ್ಯೆಯ ಸಂತ ವಲಯದಿಂದಲೂ ತೀವ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಯೋಧ್ಯೆಯ ಸ್ವಾಮೀಜಿ ವಿಷ್ಣು ದಾಸ್ ಅವರು ಈ ಹೇಳಿಕೆಯನ್ನು ಕಟು ಶಬ್ದಗಳಿಂದ ಖಂಡಿಸಿದ್ದು, ‘ಕೋಟಿ ಕೋಟಿ ಹಿಂದೂಗಳ ಆರಾಧ್ಯ ದೈವಕ್ಕೆ ಅವಮಾನ ಮಾಡಿರುವ ಮೌಲಾನಾ ಜಾರ್ಜಿಸ್ ಅನ್ಸಾರಿ ಅವರ ನಾಲಿಗೆಯನ್ನು ಕತ್ತರಿಸಿ ತಂದುಕೊಡುವವರಿಗೆ 10 ಲಕ್ಷ ರೂ.ನಗದು ಬಹುಮಾನ ನೀಡಲಾಗುವುದು’ ಎಂದು ಘೋಷಣೆ ಮಾಡಿದ್ದಾರೆ.
ಇದನ್ನೂ ಓದಿ:
ದೇವತೆಗಳ ಮೇಲಿನ ಟೀಕೆ ಸ್ವೀಕಾರಾರ್ಹವಲ್ಲ
ಈ ಬಿಕ್ಕಟ್ಟಿನ ಕುರಿತು ಪ್ರತಿಕ್ರಿಯಿಸಿರುವ ವಿಶ್ವ ಹಿಂದೂ ಪರಿಷತ್ತಿನ ರಾಷ್ಟ್ರೀಯ ವಕ್ತಾರ ವಿನೋದ್ ಬನ್ಸಾಲ್, ಇಂತಹ ಹೇಳಿಕೆಗಳು ಇತ್ತೀಚಿನ ದಿನಗಳಲ್ಲಿ ಹೊಸದೇನಲ್ಲ ಎಂದಿದ್ದಾರೆ. ಈ ಹಿಂದೆಯೂ ಅರ್ಶದ್ ಮದನಿ ಎಂಬುವವರು ಭಗವಾನ್ ಶಿವನ ಕುರಿತು ಇಂತಹದ್ದೇ ವಿಲಕ್ಷಣ ಹೇಳಿಕೆ ನೀಡಿದ್ದರು. ಮೌಲಾನಾ ಜಾರ್ಜಿಸ್ ಅವರಂತಹವರು ಹಲವು ಬಾರಿ ಮಿತಿ ಮೀರಿದ್ದಾರೆ. ಅವರ ಬಗ್ಗೆ ಯಾರಾದರೂ ಮಾತನಾಡಿದರೆ ಅವರ ಸಮುದಾಯದ ಗುಂಪುಗಳು ತಕ್ಷಣವೇ ರಕ್ಷಣೆಗೆ ಧಾವಿಸುತ್ತವೆ. ಆದರೆ ನಮ್ಮ ದೇವತೆಗಳ ಬಗ್ಗೆ ಇಂತಹ ಟೀಕೆಗಳನ್ನು ಮಾಡುವುದು ಎಂದಿಗೂ ಸ್ವೀಕಾರಾರ್ಹವಲ್ಲ, ಇವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲೇಬೇಕು ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳನ್ನು ಒತ್ತಾಯಿಸಿದ್ದಾರೆ.



