ಹೊಸದಿಗಂತ ವರದಿ,ಕುಶಾಲನಗರ:
ಬೇಟೆಗೆಂದು ತೆರಳಿದ್ದ ಸಂದರ್ಭ ನಾಪತ್ತೆಯಾಗಿದ್ದ ಆಟೋ ಚಾಲಕ ಶವವಾಗಿ ಕಾವೇರಿ ನದಿಯಲ್ಲಿ ಪತ್ತೆಯಾಗಿದ್ದಾರೆ.
ನಂಜರಾಯಪಟ್ಟಣ ಗ್ರಾಪಂ ವ್ಯಾಪ್ತಿಯ ವಿರುಪಾಕ್ಷಪುರದ ಸಿದ್ದಯ್ಯ ಎಂಬವರ ಪುತ್ರ ಆಟೋ ಚಾಲಕ ವಿನೋದ್ (29) ಮೃತಪಟ್ಟವರು.
ವಿನೋದ್, ಇತರ ಮೂವರು ಸ್ನೇಹಿತರೊಂದಿಗೆ ಬೇಟೆಗೆಂದು ಭಾನುವಾರ ಕಾವೇರಿ ನದಿ ದಾಟಿ ಮೈಸೂರು ಜಿಲ್ಲಾ ವ್ಯಾಪ್ತಿಯ ಕಾಡಿಗೆ ತೆರಳಿದ್ದರು.
ಎರಡು ದಿನದ ಬಳಿಕ ಮೂವರು ಮಾತ್ರ ಗ್ರಾಮಕ್ಕೆ ಮರಳಿದ್ದು, ವಿನೋದ್ ನಿಗೂಢವಾಗಿ ನಾಪತ್ತೆಯಾಗಿದ್ದರು.
ಈ ಸಂಬಂಧ ವಿನೋದ್ ಅವರ ಪತ್ನಿ ಅನುಷಾ ಅವರು ನೀಡಿದ ದೂರಿನ ಮೇರೆಗೆ ಬೇಟೆಗೆ ತೆರಳಿದ್ದವರ ಪೈಕಿ ವಿನೋದ್’ನ ಆಪ್ತ ಸ್ನೇಹಿತ ಧರ್ಮ ಎಂಬಾತನನ್ನು ವಿಚಾರಣೆಗೆ ಒಳಪಡಿಸಿದ್ದರು. ಆದರೆ ಯಾವುದೇ ಮಾಹಿತಿ ಪಡೆಯುವಲ್ಲಿ ಪೊಲೀಸರು ವಿಫಲವಾಗಿದ್ದರು.
ಈ ನಡುವೆ ವಿನೋದ್’ನ ಮೃತದೇಹ ಅನುಮಾನಾಸ್ಪದ ರೀತಿಯಲ್ಲಿ ಗ್ರಾಮದಿಂದ ಅನತಿ ದೂರದ ಬಾಳುಗೋಡು-ರಸುಲ್ ಪುರ ಬಳಿ ಕಾವೇರಿ ನದಿಯಲ್ಲಿ ಗುರುವಾರ ಪತ್ತೆಯಾಗಿದೆ.
ಮೇಲ್ನೋಟಕ್ಕೆ ಮೃತದೇಹದಲ್ಲಿ ಗುಂಡೇಟಿನ ಕುರುಹು ಕಂಡುಬಂದಿಲ್ಲ ಎಂದಿರುವ ಪೊಲೀಸರು, ಮೃತದೇಹದ ಮರಣೋತ್ತರ ಪರೀಕ್ಷೆಗಾಗಿ ಮಡಿಕೇರಿಗೆ ರವಾನಿಸಿದ್ದು, ವರದಿ ನಿರೀಕ್ಷೆಯಲ್ಲಿದ್ದಾರೆ.
ಬೇಟೆಗೆ ಜೊತೆಯಾಗಿ ತೆರಳಿದ್ದ ಇನ್ನಿಬ್ಬರು ಸ್ನೇಹಿತರಾದ ಯೋಗೇಶ್ ಮತ್ತು ಈಶ್ವರ ಎಂಬವರು ಮೊಬೈಲ್ ಸ್ವಿಚ್ ಆಫ್ ಮಾಡಿ ತಲೆಮರೆಸಿಕೊಂಡಿದ್ದಾರೆ