ಹೊಸದಿಗಂತ ವರದಿ, ಕುಶಾಲನಗರ:
ದ್ವಿಚಕ್ರ ವಾಹನಗಳೆರಡು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಕುಶಾಲನಗರದ ಉದ್ಯಮಿಯೊಬ್ಬರು ಮೃತಪಟ್ಟ ಘಟನೆ ಮಂಗಳವಾರ ರಾತ್ರಿ ಹೆಬ್ಬಾಲೆ ಸಮೀಪದ ಅಳುವಾರ ಗ್ರಾಮದ ಬಳಿ ನಡೆದಿದೆ.
ಸಿದ್ದಲಿಂಗಪುರದಲ್ಲಿ ಮದ್ಯದ ಅಂಗಡಿ ನಡೆಸುತ್ತಿದ್ದ ಥಾಮಸ್ ಮ್ಯಾಥ್ಯೂ (50) ಎಂಬವರೇ ಮೃತಪಟ್ಟ ವ್ಯಕ್ತಿ.
ಥಾಮಸ್ ಅವರು ಸಿದ್ದಲಿಂಗಪುರದಲ್ಲಿರುವ ತಮ್ಮ ಅಂಗಡಿಯನ್ನು ಮುಚ್ಚಿ ದ್ವಿಚಕ್ರ ವಾಹನದಲ್ಲಿ (KA12K3100)ಕುಶಾಲನಗರಕ್ಕೆ ರಾತ್ರಿ ವೇಳೆ ಬರುತ್ತಿದ್ದರು. ಈ ಸಂದರ್ಭ ಎದುರುಗಡೆಯಿಂದ ಬಂದ ಬೈಕ್ (KA 45H2036)ಡಿಕ್ಕಿಯಾಗಿದ್ದು, ಎರಡೂ ವಾಹನಗಳ ಚಾಲಕರೂ ಸೇರಿದಂತೆ ಮೂವರು ತೀವ್ರ ಗಾಯಗೊಂಡಿದ್ದರು.
ತಲೆಗೆ ತೀವ್ರ ಏಟು ಬಿದ್ದಿದ್ದ ಥಾಮಸ್ ಅವರನ್ನು ಕುಶಾಲನಗರ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ಸಾಗಿಸುವ ಸಂದರ್ಭ ಮೃತಪಟ್ಟಿದ್ದಾರೆ.
ಡಿಕ್ಕಿ ಪಡಿಸಿದ ಬೈಕ್ ಸವಾರ ಮತ್ತು ಹಿಂಬದಿ ಸವಾರನನ್ನೂ ಚಿಕಿತ್ಸೆಗಾಗಿ ಮೈಸೂರಿಗೆ ಸಾಗಿಸಲಾಗಿದ್ದು, ಅವರ ವಿವರ ಇನ್ನೂ ಲಭ್ಯವಾಗಿಲ್ಲ ಎಂದು ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಮೋಹನ್ ರಾಜ್ ತಿಳಿಸಿದ್ದಾರೆ.
ಥಾಮಸ್ ಅವರು ಪತ್ನಿ, ಇಬ್ಬರು ಹೆಣ್ಣು ಮಕ್ಕಳು ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.