ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ದಿನೇ ದಿನೇ ತಾಪಮಾನ ಹೆಚ್ಚಳವಾಗುತ್ತಿದೆ. ಬಿಸಿ ಗಾಳಿ ಬೀಸುವ ಸಾಧ್ಯತೆ ಇದ್ದು, ಮಕ್ಕಳು, ಮಹಿಳೆಯರು, ಸೇರಿದಂತೆ ಜನರು ಬಿಸಿಲಿನಿಂದ ರಕ್ಷಿಸಿಕೊಳ್ಳಲು ಆರೋಗ್ಯ ಇಲಾಖೆ ಹಲವು ಸೂಚನೆಗಳನ್ನು ನೀಡಿದೆ.
ನೀರನ್ನು ಹೆಚ್ಚಾಗಿ ಸೇವಿಸುತ್ತಿರಬೇಕು. ದೇಹವನ್ನು ನಿರ್ಜಲೀಕರಣಗೊಳ್ಳಲು ಬಿಡಬಾರದು.
ಪ್ರಯಾಣ ಮಾಡುವಾಗಲೂ ಸಹ ನಿಮ್ಮ ಜೊತೆ ನೀರನ್ನು ತೆಗೆದುಕೊಂಡು ಹೋಗಿ.
ಬೇಸಿಗೆ ಋತುವಿನಲ್ಲಿ ಲಭ್ಯವಿರುವ ತರಕಾರಿ ಹಾಗೂ ಹಣ್ಣನ್ನು ಸೇವಿಸಿ.
ಸಡಿಲವಾದ ಹತ್ತಿಯ ಬಟ್ಟೆಗಳನ್ನು ಧರಿಸಿ
ಹೆಚ್ಚಾಗಿ ಮನೆಯೊಳಗಡೆ ಇರಿ. ಹೊರಗೆ ಹೋಗುವುದು ಅನಿವಾರ್ಯವಾದರೆ ಟೋಪಿ ಅಥವಾ ಕೊಡೆಯನ್ನು ಬಳಸಿ.
ಓಆರ್ ಎಸ್, ಮಜ್ಜಿಗೆ, ನಿಂಬೆ ಪಾನಕದಂತಹ ಪಾನೀಯಗಳನ್ನು ಸೇವಿಸುತ್ತೀರಿ.
ಕೆಲಸಗಾರರಿಗೆ ಆರೋಗ್ಯ ಇಲಾಖೆಯಿಂದ ಸಲಹೆ:
ಕೆಲಸ ಮಾಡುವಾಗ 20 ನಿಮಿಷಗಳಿಗೊಮ್ಮೆ ಒಂದು ಲೋಟ ಅಥವಾ ಅದಕ್ಕಿಂತ ಹೆಚ್ಚು ನೀರನ್ನು ಕುಡಿಯಬೇಕು.
ನೆರಳಿನಲ್ಲಿ ಕೆಲಸ ನಿರ್ವಹಿಸಲು ಅನುಕೂಲವಾಗುವಂತೆ ಶೆಡ್ ಗಳನ್ನು ನಿರ್ಮಿಸಬೇಕು.
ಕೆಲಸಗಳನ್ನು ಬೆಳಗ್ಗೆ ಅಥವಾ ಸಂಜೆಯ ಸಮಯದಲ್ಲಿ ನಿರ್ವಹಿಸುವಂತೆ ವೇಳಾಪಟ್ಟಿ ತಯಾರಿಸಬೇಕು.
ಗರ್ಭಿಣಿಯರು ಅಥವಾ ಅನಾರೋಗ್ಯ ಸಮಸ್ಯೆ ಇರುವವರು ಬಿಸಿಲಿನಲ್ಲಿ ಕಾರ್ಯನಿರ್ವಹಿಸುವ ಮೊದಲು ವೈದ್ಯರ ಸಲಹೆ ಪಡೆಯಬೇಕು.
ಏನು ಮಾಡಬಾರದು?
ಮಧ್ಯಾಹ್ನ 12 ಗಂಟೆಯಿಂದ 3 ಗಂಟೆವರೆಗೆ ಬಿಸಿಲಿನಲ್ಲಿ ಹೋಗುವುದನ್ನು ತಪ್ಪಿಸಬೇಕು.
ಮಧ್ಯಾಹ್ನದ ಅವಧಿಯಲ್ಲಿ ಶ್ರಮದಾಯಕ ಕೆಲಸ ಮಾಡಬಾರದು.
ಪ್ರೊಟೀನ್ ಯುಕ್ತ ಆಹಾರವನ್ನು ಆದಷ್ಟು ಕಡಿಮೆ ಸೇವಿಸಬೇಕು. ಹೆಚ್ಚು ಸಕ್ಕರೆ ಇರುವ ಕಾರ್ಬೋನೇಟೆಡ್ ಪಾನೀಯಗಳಿಂದ ದೂರವಿರಬೇಕು.