ದಿಗಂತ ವರದಿ ಅಂಕೋಲಾ:
ಸೋಮವಾರ ರಾತ್ರಿ ಸತತವಾಗಿ ಸುರಿದ ನಿರಂತರ ಮಳೆಯಿಂದಾಗಿ ತಾಲೂಕಿನ ಶಿರೂರು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿದು ಬಿದ್ದಿದ್ದು ಹೆದ್ದಾರಿ ಪಕ್ಕದ ಅಂಗಡಿ ಮನೆಗಳಲ್ಲಿ ಇರುವ ಸುಮಾರು 7 ಜನರು ಮಣ್ಣಿನ ಅಡಿ ಸಿಲುಕಿದ್ದಾರೆ ಎಂದು ಹೇಳಲಾಗುತ್ತಿದೆ.
ರಾಷ್ಟ್ರೀಯ ಹೆದ್ದಾರಿ 66 ಅಂಕೋಲಾ ಕುಮಟಾ ಮಾರ್ಗದಲ್ಲಿ ಗುಡ್ಡ ಕುಸಿದು ಬಿದ್ದಿದ್ದು ಲಾರಿ ಸೇರಿದಂತೆ ಕೆಲವು ವಾಹನಗಳು ಮಣ್ಣಿನ ಅಡಿ ಸಿಲುಕಿರುವ ಸಾಧ್ಯತೆ ಇದೆ. ಗುಡ್ಡದ ಮಣ್ಣಿನ ಜೊತೆ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ನಿಲ್ಲಿಸಿದ ಟ್ಯಾಂಕರ್ ಪಕ್ಕದಲ್ಲಿ ಹರಿಯುತ್ತಿರುವ ಗಂಗಾವಳಿ ನದಿ ನೀರಿನಲ್ಲಿ ಕೊಚ್ಚಿ ಹೋಗಿದ್ದು ಭಾರೀ ಪ್ರಮಾಣದಲ್ಲಿ ಮಣ್ಣು ನದಿಯ ನೀರಿನಲ್ಲಿ ಹಾಸಿದಂತಾಗಿ ನೀರು ಸಾರಾಗವಾಗಿ ಹರಿಯಲು ತೊಂದರೆ ಆಗುತ್ತಿದೆ.
ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದ್ದು ವಾಹನಗಳು ಹೆದ್ದಾರಿಯಲ್ಲಿ ಸಾಲುಗಟ್ಟಿ ನಿಂತಿವೆ. ಅಂಕೋಲಾ ಪೊಲೀಸರು, ಅಗ್ನಿಶಾಮಕ, ರಾಷ್ಟ್ರೀಯ ಹೆದ್ದಾರಿ ಸಿಬ್ಬಂದಿಗಳು ಸ್ಥಳಕ್ಕೆ ದಾವಿಸಿದ್ದು ಮಣ್ಣು ತೆರುವು ಕಾರ್ಯಾಚರಣೆ ನಡೆಯುತ್ತಿದೆ.