ಹೊಸದಿಗಂತ ವರದಿ ಕಾಸರಗೋಡು:
ಎಡೆಬಿಡದೆ ಸುರಿಯುತ್ತಿರುವ ಮಳೆ ಹಾಗೂ ಪ್ರಬಲ ಗಾಳಿಯಿಂದಾಗಿ ಕಾಸರಗೋಡು ಜಿಲ್ಲೆಯ ವಿವಿಧೆಡೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಬಿರುಗಾಳಿಯಿಂದಾಗಿ ಹಲವೆಡೆ ಮರಗಳು ನೆಲಕಚ್ಚಿದ್ದು, ಅನೇಕ ಕಡೆಗಳಲ್ಲಿ ವಾಹನ ಸಂಚಾರ ಮೊಟಕುಗೊಂಡಿದೆ.
ಜಿಲ್ಲೆಯ ವಿವಿಧೆಡೆ ಮಳೆನೀರು ರಸ್ತೆಯಲ್ಲಿ ಹರಿಯುತ್ತಿದ್ದು ವಾಹನ ಸಂಚಾರಕ್ಕೆ ತೊಡಕಾಗಿ ಪರಿಣಮಿಸಿದೆ. ಮುಳ್ಳೇರಿಯ – ಚೆರ್ಕಳ ರಸ್ತೆಯ ಶಾಂತಿ ನಗರದಲ್ಲಿ ಮರವೊಂದು ರಸ್ತೆಗೆ ಬಿದ್ದು ಅಲ್ಪ ಹೊತ್ತು ವಾಹನ ಸಂಚಾರ ಮೊಟಕುಗೊಂಡಿತು. ಬದಿಯಡ್ಕ – ಏತಡ್ಕ – ಕಿನ್ನಿಂಗಾರು ರಸ್ತೆಯ ಶಾಂತಿಯಡಿ ಎಂಬಲ್ಲಿ ಗುಡ್ಡ ಜರಿದು ರಸ್ತೆಗೆ ಬಿದ್ದಿದೆ. ಬದಿಯಡ್ಕ – ಪೆರ್ಲ ರಸ್ತೆಯ ಪಳ್ಳತ್ತಡ್ಕ ಸೇತುವೆ ಬಳಿ ರಸ್ತೆಯಲ್ಲಿ ನೀರು ತುಂಬಿಕೊಂಡಿದೆ. ಅಲ್ಲದೆ ವರ್ಕಾಡಿ, ಪೈವಳಿಕೆ, ಮಂಜೇಶ್ವರ, ಕುಂಬಳೆ ಮುಂತಾದ ಭಾಗಗಳಲ್ಲೂ ತೀವ್ರ ಮಳೆಯಿಂದಾಗಿ ಸಾರಿಗೆ ಸಂಚಾರಕ್ಕೆ ಸಮಸ್ಯೆ ತಲೆದೋರಿದೆ.
ಮುಂದಿನ ದಿನಗಳಲ್ಲಿ ಮಳೆ ಇನ್ನಷ್ಟು ತೀವ್ರಗೊಳ್ಳಲಿದ್ದು, ಜನರು ಜಾಗರೂಕತೆ ವಹಿಸುವಂತೆ ಕಾಸರಗೋಡು ಜಿಲ್ಲಾಡಳಿತವು ಮನವಿ ಮಾಡಿದೆ. ಸಮುದ್ರ ಕರಾವಳಿ ಪ್ರದೇಶಗಳಲ್ಲಿ ಬೃಹತ್ ಅಲೆಗಳು ಕಾಣಿಸಿಕೊಳ್ಳುತ್ತಿದ್ದು , ಕಡಲ್ಕೊರೆತ ಸಂಭವಿಸುವ ಸಾಧ್ಯತೆಯೂ ಕಂಡುಬರುತ್ತಿದೆ.