ಕೊಡಗಿನಲ್ಲಿ ಘರ್ಜಿಸಿದ ಮಳೆ: ಸಿಡಿಲಿನ ಏಟಿಗೆ ಬೆಟ್ಟಗೇರಿ ಗ್ರಾಮದಲ್ಲಿ ಓರ್ವ ಬಲಿ

ದಿಗಂತ ವರದಿ ಮಡಿಕೇರಿ:

ಕೊಡಗು ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಶುಕ್ರವಾರ ಸಂಜೆಯಿಂದ ರಾತ್ರಿವರೆಗೂ ಹಗುರದಿಂದ ಸಾಧಾರಣ ಮಳೆಯಾಗಿದೆ. ಸಿಡಿಲ ಅಬ್ಬರಕ್ಕೆ ಓರ್ವ ಬಲಿಯಾಗಿದ್ದು, ಮತ್ತೊಂದೆಡೆ ಗಾಳಿಗೆ ವಿದ್ಯುತ್ ಕಂಬ ಕಾರಿನ ಮೇಲೆ ಮುರಿದು ಬಿದ್ದ ಪರಿಣಾಮ ಕಾರಿಗೆ ಹಾನಿಯಾಗಿದೆ.

ಕುಶಾಲನಗರ ಮತ್ತು ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಗುಡುಗು, ಸಿಡಿಲ ಅಬ್ಬರದಿಂದ ಕೆಲಹೊತ್ತು ಬಿರುಸಿನ ಮಳೆ ಸುರಿದಿದೆ. ಮಡಿಕೇರಿಯಲ್ಲೂ ಗುಡುಗು, ಸಿಡಿಲು, ಗಾಳಿಯ ಅಬ್ಬರದೊಂದಿಗೆ ಮಳೆಯಾಗಿದೆ.
ಗೋಣಿಕೊಪ್ಪಲು, ಪೊನ್ನಂಪೇಟೆ, ಬೇಗೂರು, ಬಿ.ಶೆಟ್ಟಿಗೆರಿ, ಕುಂದ ಭಾಗದಲ್ಲಿ ಗುಡುಗು, ಬಿರುಗಾಳಿ ಸಹಿತ ವರ್ಷದ ಮೊದಲ ಮಳೆ ಸುರಿದಿದೆ. ವೀರಾಜಪೇಟೆಯಲ್ಲೂ ಸಾಧಾರಣ ಮಳೆಯಾಗಿದ್ದು, ಸಿದ್ದಾಪುರ ಭಾಗದಲ್ಲೂ ಮಳೆ ಸುರಿದಿದೆ.

ಸಿಡಿಲಿಗೆ ಕಾರ್ಮಿಕ ಬಲಿ: ಮಡಿಕೇರಿ ತಾಲೂಕಿನ ಬೆಟ್ಟಗೇರಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಸಿಡಿಲು ಬಡಿದು ಒರಿಸ್ಸಾ ಮೂಲದ ಕಾರ್ಮಿಕ ಬಲಿಯಾಗಿದ್ದಾನೆ. ಮೃತನನ್ನು ಪ್ರಮಾತ್ ಗರ್ಮಾನಿ (37) ಎಂದು ಗುರುತಿಸಲಾಗಿದ್ದು, ಈತ ಬೆಟ್ಟಗೇರಿಯ ಮನೆಯೊಂದರಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದರೆನ್ನಲಾಗಿದೆ. ಮಳೆ ಬರುವ ವೇಳೆ ಮನೆಯಿಂದ ಹೊರಗೆ ನಿಂತಿದ್ದಾಗ ಸಿಡಿಲು ಬಡಿದಿದೆ. ತೀವ್ರವಾಗಿ ಗಾಯಗೊಂಡ ಅವರನ್ನು ಆಸ್ಪತ್ರೆಗೆ ಕರೆ ತರುವ ವೇಳೆ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿದ್ಯುತ್ ಕಂಬ ಬಿದ್ದು ಹಾನಿ: ವೀರಾಜಪೇಟೆ ತಾಲೂಕಿನ ಅಮ್ಮತ್ತಿ ಗ್ರಾಮದ ಪುಲಿಯೇರಿಯಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಕಾರಿ‌ನ ಮೇಲೆ ವಿದ್ಯುತ್ ಕಂಬ ಮುರಿದು ಬಿದ್ದ ಪರಿಣಾಮ ಕಾರಿನ ಮೇಲ್ಭಾಗ ಸಂಪೂರ್ಣ ಜಖಂಗೊಂಡಿದೆ. ಕಾರು ಎಂ.ಕೆ.ಹರಿದಾಸ್ ಎಂಬವರಿಗೆ ಸೇರಿದ್ದೆನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!