ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಮಳೆಯ ಅವಾಂತರ ಹೆಚ್ಚಾಗಿದ್ದು, ನಾನಾ ಅನಾಹುತಗಳು ಸಂಭವಿಸಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆರಾಯನ ಅಬ್ಬರಕ್ಕೆ ವೃದ್ಧೆ ಬಲಿಯಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನ ಸುಬ್ರಹ್ಮಣ್ಯ ಸಮೀಪದ ಗ್ರಾಮ ಕುಲ್ಕುಂದ ಎಂಬಲ್ಲಿ ಬಸವನಮೂಲೆ ನಿವಾಸಿ ಶೇಷಪ್ಪ ಎಂಬವರ ಪತ್ನಿ ಮೀನಾಕ್ಷಿ ಬಸವನಮೂಲೆ ಎಂಬುವವರ ಮೇಲೆ ಮರ ಉರುಳಿ ಬಿದ್ದು ವೃದ್ಧೆ ಮೃತಪಟ್ಟಿದ್ದಾರೆ. ಮೀನಾಕ್ಷಿ ತಮ್ಮ ತೋಟದಲ್ಲಿ ಕಟ್ಟಿದ್ದ ಜಾನುವಾರು ಬಿಡಿಸಿ ತರಲು ತೆರಳಿದ್ದ ವೇಳೆ ಗಾಳಿ-ಮಳೆಗೆ ಮರ ಉರುಳಿ ಬಿದ್ದು ಘಟನೆ ನಡೆದಿದೆ.
ಇನ್ನು ವಿಜಯನಗರ ಜಿಲ್ಲೆ ಕೊಟ್ಟೂರು ಪಟ್ಟಣದಲ್ಲಿ ಧಾರಾಕಾರ ಮಳೆಯಾಗಿದೆ. ಮಳೆ ಆರ್ಭಟಕ್ಕೆ ಕೊಟ್ಟೂರಿನ ಬಸ್ ನಿಲ್ದಾಣದಲ್ಲಿ ಎರಡು ಅಡಿಗೂ ಅಧಿಕ ಮಳೆ ನೀರು ನಿಂತು ಜಲಾವೃತವಾಗಿದೆ.ಮಳೆ ಅಬ್ಬರಕ್ಕೆ ಪ್ರಯಾಣಿಕರು ಪರದಾಡಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ ಮಳೆಯಾಗಿಲ್ಲ. ಆದರೆ ಇಂದು ಬೆಂಗಳೂರಲ್ಲಿ ರಾತ್ರಿ ಭರ್ಜರಿ ಮಳೆಯಾಗುವ ಬಗ್ಗೆ ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.