ಹೊಸದಿಗಂತ ವರದಿ,ಕಲಬುರಗಿ:
ಮಹಾರಾಷ್ಟ್ರದ ಕೋಯ್ನಾ ಮತ್ತಿತರ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯಿಂದ ಒಳ ಹರಿವು ಹೆಚ್ಚಳವಾಗುತ್ತಿದ್ದು ರಾಜ್ಯದ ಮೂರನೇ ಹಾಗೂ ಕ.ಕ.ಭಾಗದ ದೊಡ್ಡ ಆಣೆಕಟ್ಟಾದ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಕೊಡೇಕಲ್ಗೆ ಸಮೀಪದ ನಾರಾಯಣಪುರದ ಬಸವಸಾಗರ ಜಲಾಶಯದ 3 ಕ್ರಷ್ಟ್ಗೇಟ್ ತೆರೆದು 17 ಸಾವಿರ ಕ್ಯೂಸೆಕ್ ನೀರನ್ನು ಸೋಮವಾರ ಮಧ್ಯಾಹ್ನ ಕೃಷ್ಣೆಗೆ ಹರಿಸಲಾಗಿದೆ.
ಮಹಾಬಲೇಶ್ವರ, ಮುಂಬೈ, ಸಾಂಗ್ಲಿ, ಮಿರಜ ಸೇರಿ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮತ್ತೇ ಮಳೆ ಸುರಿಯುತ್ತಿರುವ ನಿಟ್ಟಿನಲ್ಲಿ ಆಲಮಟ್ಟಿ ಲಾಲ್ ಬಹಾದ್ದೂರ ಶಾಸ್ತಿç ಜಲಾಶಯಕ್ಕೆ ನೀರು ಹರಿದು ಬರುತ್ತಿದ್ದು ನೀರಿನ ಒಳ ಹರಿವು ಹೆಚ್ಚಾಗಿದೆ, ಆಲಮಟ್ಟಿ ಜಲಾಶಯ ಭರ್ತಿಯಾಗಿ 30 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದ್ದು, ಇದರಿಂದ ನಾರಾಯಣಪುರದ ಬಸವಸಾಗರ ಜಲಾಶಯವು ಕೂಡ ಭರ್ತಿಯಾಗಿ ನೀರಿನ ಸಂಗ್ರಹ ಗರಿಷ್ಠ ಮಟ್ಟ ತಲುಪಿದ್ದು ಜಲಾಶಯದ 3 ಮುಖ್ಯ ಕ್ರಸ್ಟ್ಗೇಟುಗಳನ್ನು ತೆರೆಯುವ ಮೂಲಕ 17 ಸಾವಿರ ಕ್ಯೂಸೆಕ್ ನೀರನ್ನು ಕೃಷ್ಣೆಗೆ ಹರಿಸಲಾಗುತ್ತಿದೆ.
ಇದರಿಂದ ಸದ್ಯ ಕೃಷ್ಣಾ ತೀರದ ಬಂಡೋಳ್ಳಿ, ತಿಂಥಣಿ, ಬೆಂಚಿಗಡ್ಡಿ, ದೇವರಗಡ್ಡಿ, ಮೇಲಿನಗಡ್ಡಿ, ನೀಲಕಂಠ ರಾಯನಗಡ್ಡಿ ಸೇರಿ ಇತರೆ ಗ್ರಾಮಗಳ ಜನ-ಜಾನುವಾರು ನದಿಗೆ ಇಳಿಯದಂತೆ ಸೂಚನೆ ಹೊರಡಿಸಲಾಗಿದೆ ಜತೆಗೆ ಆತಂಕ ಶುರುವಾಗಿದೆ. 33.31 ಟಿಎಂಸಿ ಗರಿಷ್ಠ ನೀರಿನ ಸಂಗ್ರಹವಿರುವ ಬಸವಸಾಗರ ಜಲಾಶಯದಲ್ಲಿ ಸದ್ಯ ನೀರಿನ ಸಂಗ್ರಹ 28.655 ಟಿಎಂಸಿ ತಲುಪಿದೆ, ಜಲಾಶಯದ ನೀರಿನ ಸಂಗ್ರಹ ಮಟ್ಟ
ಕಾಯ್ದುಕೊಂಡು ಜಲಾಶಯದ 3 ಕ್ರಸ್ಟ್ ಗೇಟ್ ತೆರೆಯುವ ಮೂಲಕ 17 ಸಾವಿರ ಕ್ಯೂಸೆಕ್ ನದಿಗೆ
ನೀರು ಹರಿಸಲಾಗುತ್ತಿದೆ. ಇನ್ನೂ ಒಳ ಹರಿವು ಹೆಚ್ಚಳವಾದಾಗ ಹಂತ ಹಂತವಾಗಿ ಗೇಟ್ಗಳನ್ನು ಹೆಚ್ಚಿಸಿ ನೀರನ್ನು ಜಾಸ್ತಿ ಬಿಡಲಾಗುವುದು ಎಂದು ನಿಗಮದ ಅಧಿಕಾರಿಗಳಿಂದ ತಿಳಿದು ಬಂದಿದೆ. ನಾರಾಯಣಪುರ ಜಲಾಶಯದಿಂದ ಕೃಷ್ಣೆಗೆ ನೀರು ಬಿಡುಗಡೆ ಮಾಡಿದ ಕಾರಣ ಜಿಲ್ಲಾಡಳಿತ ನದಿ ಪಾತ್ರದ ಜನ-ಜಾನುವಾರುಗಳನ್ನು ಸುರಕ್ಷತೆ ಕಾಯ್ದುಕೊಳ್ಳಲು ಸೂಚನೆ ನೀಡಿದೆ