ಹೊಸದಿಗಂತ ಡಿಜಿಟಲ್ ಡೆಸ್ಕ್:
ಅನಂತಪುರ ಈ ಹೆಸರು ಕೇಳಿದರೆ ಮೊದಲು ನೆನಪಾಗುವುದು ಬರದ ನಾಡು ಅಂತ. ಅಂತಹ ಅನಂತಪುರ ಜಿಲ್ಲೆಯಲ್ಲಿ ಹಿಂದೆಂದೂ ಕಾಣದ ರೀತಿಯಲ್ಲಿ ಮಳೆ ಅವಾಂತರ ಸೃಷ್ಟಿಸುತ್ತಿದೆ. ಧಾರಾಕಾರ ಮಳೆಯಾಗುತ್ತಿದ್ದು, ಪ್ರವಾಹ ಸೃಷ್ಟಿಯಾಗಿ ಅನೇಕ ಪ್ರದೇಶಗಳು, ಕಾಲೋನಿಗಳು ಜಲಾವೃತವಾಗಿದೆ. ಪ್ರವಾಹದಿಂದಾಗಿ ಜನ ಪರದಾಡುವಂತಾಗಿದೆ.
ಧಾರಾಕಾರ ಮಳೆಯಿಂದಾಗಿ ಅನಂತಪುರ ಸುತ್ತಮುತ್ತಲಿರುವ ಕೆರೆಗಳು ತುಂಬಿ ಕೋಡಿ ಹರಿದಿವೆ. ರಸ್ತೆಗಳು ಕೊಳಗಳಂತೆ ಕಾಣುತ್ತಿದ್ದು, ವಿಶ್ವಶಾಂತಿ ನಗರ, ರುದ್ರಂಪೇಟೆ, ಜಾಕೀರ್ ಕೊಟ್ಟಾಳು, ಆದರ್ಶ ಕಾಲೋನಿ, ಸುಂದರಯ್ಯ ಕಾಲೋನಿ, ದಂಡೋರ ಕಾಲೋನಿ ಜಲಾವೃತಗೊಂಡಿವೆ.
ಮೇಲಿಂದ ಮೇಲೆ ಬರುತ್ತಿರುವ ಪ್ರವಾಹದಿಂದಾಗಿ ಅನಂತಪುರದ ರಾಮಯ್ಯ ಕಾಲೋನಿಯಲ್ಲಿ ನೀರಿನ ಹರಿವು ಹೆಚ್ಚಾಗುತ್ತಿದೆ. ಈಗಾಗಲೇ ಮೂರು ಅಡಿ ತಲುಪಿರುವ ನೀರಿನ ಮಟ್ಟ ಪ್ರತಿ ಗಂಟೆಗೊಮ್ಮೆ ಹೆಚ್ಚಾಗುತ್ತಿದ್ದು, ಉದ್ವಿಗ್ನತೆ ಸೃಷ್ಟಿಸುತ್ತಿದೆ. ಸ್ಥಳೀಯ ಪೊಲೀಸರು, ಜಿಲ್ಲಾಡಳಿತ ಸಂತ್ರಸ್ತರ ನೆರವಿಗೆ ಧಾವಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.