ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಡಿಶಾದಲ್ಲಿ ನಡೆದ ಘಟನೆಯೊಂದು ಎಲ್ಲರನ್ನೂ ಮೂಗುಮುರಿಯುವಂತೆ ಮಾಡಿತು. ಏನಾಯ್ತು ಗೊತ್ತಾ? ಆನೆಗಳ ಹಿಂಡು ಕಳ್ಳಬಟ್ಟಿ ಸಾರಾಯಿ ಕುಡಿದು ಪ್ರಜ್ಞೆಯಿಲ್ಲದಂತೆ ಮಲಗಿವೆ.
ವಿಷಯ ಏನೆಂದರೆ, 24 ಆನೆಗಳ ಹಿಂಡು ಕಾಡಿನಲ್ಲಿ ಇಟ್ಟಿದ್ದ ಸಾರಾಯಿ ಕುಡಿದು ಮತ್ತಿನಲ್ಲಿ ನಿದ್ದಗೆ ಜಾರಿರುವ ಘಟನೆ ಒಡಿಶಾದ ಕಿಯೋಂಜಾರ್ ಜಿಲ್ಲೆಯಲ್ಲಿ ನಡೆದಿದೆ. ಸಾರಾಯಿ ಕಾಯಿಸಲು ಬಂದ ಗ್ರಾಮಸ್ಥರು ಆನೆಗಳು ಮಲಗಿದ್ದನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ಆನೆಗಳನ್ನು ಎಬ್ಬಿಸಲು ಸರ್ವ ಪ್ರಯತ್ನಗಳನ್ನು ಮಾಡಿ ವಿಫಲರಾದ ಬಳಿಕ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅಧಿಕಾರಿಗಳು ಬಂದು ಡೋಲು ಬಾರಿಸಿ ಜೋರು ಶಬ್ಧ ಮಾಡಿದ್ದಕ್ಕೆ ಎದ್ದು ನಿಂತ ಆನೆಗಳ ಹಿಂಡು ಭಯಬಿದ್ದು ಕಾಡಿಗೆ ಓಡಿದ್ದಾವೆ.
ಈ ಬಗ್ಗೆ ಮಾತನಾಡಿದ ಗ್ರಾಮಸ್ಥರೊಬ್ಬರು ನಾವು ಸಾರಾಯಿ ತಯಾರಿಸಲು ಬೆಳಿಗ್ಗೆ 6 ಗಂಟೆಗೆ ಕಾಡಿಗೆ ಹೋದಾಗ ಅಲ್ಲಿದ್ದ ಸಾರಾಯಿ ಕಾಯಿಸಲು ಇಟ್ಟಿದ್ದ ಮಡಕೆಗಳೆಲ್ಲ ಒಡೆದು ಹೋಗಿದ್ದವು. ಮಡಿಕೆಯಲ್ಲಿಟ್ಟಿದ್ದ ಸಾರಾಯಿ ಕಾಣದೆ ಹುಡುಕಾಡಿದಾಗ ಅಲ್ಲೇ ಪಕ್ಕದಲ್ಲಿ 24 ಆನೆಗಳು ಮಲಗಿರುವುದು ಕಂಡುಬಂದಿದೆ. ಆಗಲೇ ಗೊತ್ತಾಗಿದ್ದು ಆನೆಗಳು ಎಲ್ಲವನ್ನು ಗುಳುಂ ಸ್ವಾಹ ಮಾಡಿವೆಯೆಂದು ಕೂಡಲೇ ಪ್ರಾಣಿಗಳನ್ನು ಎಬ್ಬಿಸಲು ಪ್ರಯತ್ನಿಸಿ ವಿಫಲದೆವು. ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ ಎಂದು ಗ್ರಾಮಸ್ಥರು ತಿಳಿಸಿದರು.