ಹೊಸದಿಗಂತ ವರದಿ, ಶಿವಮೊಗ್ಗ:
ರಾಮಾಯಣದಲ್ಲಿ ರಾಮ ಸೇತು ನಿರ್ಮಾಣದಲ್ಲಿ ಅಳಿಲು ಸೇವೆಯ ಬಗ್ಗೆ ಕೇಳಿದ್ದೇವೆ. ಕಮಲಾ ನೆಹರು ಮಹಿಳಾ ಕಾಲೇಜಿನಲ್ಲಿ ಬಿ.ಕಾಂ.ಪ್ರಥಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಕು.ಜ್ಯೋತಿಕಾ ವಿ.ಶೇಟ್ ಅವರ ಭದ್ರಾವತಿ ನಿವಾಸದಲ್ಲಿ ಕಳೆದ ಐದಾರು ತಿಂಗಳಿಂದ ಪುಟಾಣಿ ಅಳಿಲೊಂದು ಮನೆಯ ಅಚ್ಚು ಮೆಚ್ಚಿನ ಸದಸ್ಯನಾಗಿ ಸೇರ್ಪಡೆಯಾಗಿದೆ.
ಚಿಕ್ಕ ಮಕ್ಕಳಂತೆ ಆಟವಾಡುತ್ತಾ, ಕುಣಿಯುತ್ತ, ಜಿಗಿಯುತ್ತಾ, ಮೈಮೇಲೆ ಹತ್ತಿ ಕಾಟ ಕೊಡುತ್ತಾ ಮನರಂಜನೆ ನೀಡುತ್ತಿರುವ ಅಳಿಲು ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಮೇಜಿನ ಮೇಲಿಟ್ಟಿರುವ ತಿರಂಗಾವನ್ನು ಶಾಲಾ ಮಕ್ಕಳು ಹಿಡಿದಿರುವ ರೀತಿಯಲ್ಲೇ ಹಿಡಿದು ಮನರಂಜನೆ, ರಾಷ್ಟ್ರ ಪ್ರೇಮವನ್ನೂ ಮೆರೆಯುತ್ತಿದೆ ಈ ಅಳಿಲು.