ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಹಲ್ಗಾಮ್ನಲ್ಲಿ ಪ್ರವಾಸಿಗರ ಮೇಲೆ ನಡೆದ ಉಗ್ರರ ಗುಂಡಿನ ದಾಳಿ ಹಿನ್ನೆಲೆಯಲ್ಲಿ ಭಾರತದಲ್ಲಿರುವ ಎಲ್ಲ ಪಾಕಿಸ್ತಾನದ ಪ್ರಜೆಗಳು ದೇಶ ತೊರೆಯಬೇಕೆಂಬ ಕೇಂದ್ರ ಸರ್ಕಾರದ ಆದೇಶದಲ್ಲಿ ಮಧ್ಯಪ್ರವೇಶಿಸಲು ಹೈಕೋರ್ಟ್ ನಿರಾಕರಿಸಿದೆ. ಜೊತೆಗೆ ತಮ್ಮ ವಿರುದ್ಧ ಬವಲವಂತದ ಕ್ರಮ ಕೈಗೊಳ್ಳದಂತೆ ಸರ್ಕಾರಕ್ಕೆ ನಿರ್ದೇಶನ ಕೋರಿ ಭಾರತೀಯ ತಾಯಿ ಮತ್ತು ಪಾಕಿಸ್ತಾನದ ತಂದೆಗೆ ಜನಿಸಿದ ಪಾಕಿಸ್ತಾನದ ಮೂವರು ಅಪ್ರಾಪ್ತ ಮಕ್ಕಳು ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿ ಆದೇಶಿಸಿದೆ.
ಬೀಬಿ ಯಮೀನಾ, ಮುಹಮ್ಮದ್ ಮುದಸ್ಸಿರ್, ಮತ್ತು ಮುಹಮ್ಮದ್ ಯೂಸುಫ್ ಎಂಬ ಮಕ್ಕಳ ಪರವಾಗಿ ಅವರ ತಾಯಿ ರಾಂಷಾ ಜಹಾನ್ ಅರ್ಜಿ ಸಲ್ಲಿಸಿದ್ದರು.
ರಾಂಷಾ ಜಹಾನ್, ಮೈಸೂರಿನವರಾಗಿದ್ದು, ಪಾಕಿಸ್ತಾನಿ ಮುಹಮ್ಮದ್ ಫಾರೂಕ್ ಅವರನ್ನು 2015ರ ಸೆಪ್ಟೆಂಬರ್ 9ರಂದು ಪಾಕಿಸ್ತಾನದ ಪಿಶಿನ್ನಲ್ಲಿ ಷರಿಯತ್ ಕಾನೂನಿನಂತೆ ವಿವಾಹವಾಗಿದ್ದರು. ಈ ದಂಪತಿಗೆ ಜನಿಸಿದ ಮೂವರು ಮಕ್ಕಳು ಪಾಕಿಸ್ತಾನದ ಪೌರತ್ವ ಹೊಂದಿದ್ದಾರೆ. ಆದರೆ ರಾಂಷಾ ಜಹಾನ್ ಪಾಕಿಸ್ತಾನಿ ಪೌರತ್ವ ಪಡೆದಿರಲಿಲ್ಲ.
2025ರ ಜನವರಿ 4ರಂದು ವೀಸಾ ಪಡೆದು ರಾಂಷಾ ತಮ್ಮ ಮಕ್ಕಳೊಂದಿಗೆ ಭಾರತಕ್ಕೆ ಆಗಮಿಸಿದ್ದರು. ಜೂನ್ 18ರವರೆಗೆ ಭಾರತದಲ್ಲಿ ಉಳಿಯಲು ಅನುಮತಿಸಿದ್ದ ವೀಸಾವನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿ, ಏಪ್ರಿಲ್ 30ರ ಒಳಗೆ ದೇಶ ತೊರೆಯುವಂತೆ ಸೂಚಿಸಿತ್ತು. ಈ ಆದೇಶದಂತೆ ಮಕ್ಕಳೊಂದಿಗೆ ಅಟ್ಟಾರಿ ಗಡಿಗೆ ತೆರಳಿದ್ದ ರಾಂಷಾ, ಮಕ್ಕಳನ್ನು ಕರೆದೊಯ್ಯಲು ತಂದೆ ಗಡಿಗೆ ಆಗಮಿಸದ ಕಾರಣ ಮೈಸೂರಿಗೆ ವಾಪಸಾಗಿದ್ದರು.
ಬಲವಂತದ ಕ್ರಮದ ಭೀತಿಯಿಂದ ಮಕ್ಕಳು ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿ, ಮಾನವೀಯತೆ ಮತ್ತು ಅನುಕಂಪದ ಆಧಾರದಲ್ಲಿ ಮೇ 15ರವರೆಗೆ ವೀಸಾ ವಿಸ್ತರಣೆ ಕೋರಿದ್ದರು. ಆದರೆ, ದೇಶದ ಹಿತಾಸಕ್ತಿ ರಕ್ಷಣೆಗಾಗಿ ಕೇಂದ್ರ ಸರ್ಕಾರ ಏಪ್ರಿಲ್ 28ರ ಒಳಗೆ ದೇಶ ತೊರೆಯುವಂತೆ ಆದೇಶಿಸಿರುವುದರಿಂದ ಈ ವಿಚಾರದಲ್ಲಿ ಮಧ್ಯಪ್ರವೇಶಿಸಲು ಬಯಸುವುದಿಲ್ಲ ಎಂದು ನ್ಯಾಯಮೂರ್ತಿ ಎಂ. ಜಿ. ಉಮಾ ಅವರ ರಜಾಕಾಲೀನ ಏಕಸದಸ್ಯ ಪೀಠ ತಿಳಿಸಿ, ಅರ್ಜಿಯನ್ನು ವಜಾಗೊಳಿಸಿದೆ.