ಹೊಸದಿಗಂತ ವರದಿ, ಮಂಡ್ಯ:
ರಾಜ್ಯದಲ್ಲಿ ಇಳಕಲ್ ಸೀರೆಯುಟ್ಟವರು ತಲೆಯ ಸೆರಗನ್ನು ಹಾಕಿಕೊಳ್ಳುತ್ತಿದ್ದರು. ಹಿಜಾಬ್ ಎನ್ನುವುದು ಕೂಡ ಸೆರಗು ಮುಚ್ಚಿಕೊಳ್ಳುವುದು ಎಂದು ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ವಿಶ್ಲೇಷಿಸಿದರು.
ಹಿಜಾಬ್ ವಿಚಾರವನ್ನು ಸುಖಾಸುಮ್ಮನೆ ದೊಡ್ಡದು ಮಾಡಲಾಗುತ್ತಿದೆ. ತಲೆ ಮೇಲೆ ಸೆರಗು ಹಾಕಿಕೊಳ್ಳುವುದನ್ನು ಬೇಡ ಎಂದರೆ ಎಷ್ಟರ ಮಟ್ಟಿಗೆ ಸರಿ. ರಾಷ್ಟ್ರಪತಿಯಾಗಿದ್ದ ಪ್ರತಿಭಾ ಪಾಟೀಲ್ ಕೂಡ ತಲೆ ಮೇಲೆ ಸೆರಗು ಹಾಕುತ್ತಿದ್ದರು. ಅದನ್ನು ಯಾರೂ ಪ್ರಶ್ನಿಸಲಿಲ್ಲ. ಇದನ್ನೇಕೆ ದೊಡ್ಡದು ಮಾಡುತ್ತಿದ್ದಾರೆ. ರಾಮಮಂದಿರ, ಗೋಹತ್ಯೆ ವಿಚಾರಗಳೆಲ್ಲವೂ ಮುಗಿಯಿತು. ಮುಂದಿನ ಚುನಾವಣೆಗೆ ಹೋಗಲು ಬಿಜೆಪಿಯವರ ಬಳಿ ಯಾವ ವಿಚಾರವೂ ಇಲ್ಲ. ಪೆಟ್ರೋಲ್ ದರವನ್ನು 100 ರು. ಮಾಡಿದ್ದಾರೆ. ಅವರ ವೈಲ್ಯಗಳನ್ನು ಮುಚ್ಚಿಕೊಳ್ಳಲು ಹಿಜಾಬ್ ವಿಚಾರ ದೊಡ್ಡದು ಮಾಡುತ್ತಿದ್ದಾರೆ ಎಂದು ಹೊಳಲು ಗ್ರಾಮದಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಕೇಸರಿ ಶಾಲು ಮತ್ತು ಹಿಜಾಬ್ಗೆ ಸಂಬಂಧಿಸಿದಂತೆ ಹೈಕೋರ್ಟ್ ನೀಡುವ ತೀರ್ಪಿಗೆ ನಾವೆಲ್ಲರೂ ತಲೆಬಾಗುತ್ತೇವೆ. ನಮಗೆ ನ್ಯಾಯಾಲಯದ ಬಗ್ಗೆ ಅಪಾರ ಗೌರವವಿದೆ. ಆದರೆ, ತಲೆ ಮೇಲೆ ಸೆರಗು ಹಾಕಬೇಡ ಎಂದು ಹೇಳುವುದು ಸರಿಯಲ್ಲ ಎಂದೂ ನುಡಿದರು.