ದಿಗಂತ ವರದಿ ವಿಜಯಪುರ:
ಹಿಜಾಬ್- ಕೇಸರಿ ಶಾಲು ವಿವಾದ ಸದ್ಯ ಕುಂಕುಮ ವಿಚಾರಕ್ಕೆ ಥಳಕು ಹಾಕಿಕೊಂಡಿದ್ದು, ವಿದ್ಯಾರ್ಥಿ ಹಾಗೂ ಉಪನ್ಯಾಸಕರೊಬ್ಬರ ಮಧ್ಯೆ ವಾಗ್ವಾದ ನಡೆದಿರುವ ಘಟನೆ ಜಿಲ್ಲೆಯಲ್ಲಿ ಶುಕ್ರವಾರ ನಡೆದಿದೆ.
ಜಿಲ್ಲೆಯ ಇಂಡಿ ಪಟ್ಟಣದ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ಹಣೆಗೆ ಕುಂಕುಮ ಹಚ್ಚಿಕೊಂಡು ಬಂದ ವಿದ್ಯಾರ್ಥಿ ಗಂಗಾಧರ ಬಡಿಗೇರಗೆ ಪ್ರವೇಶ ನಿರಾಕರಿಸಿದಕ್ಕೆ, ಕಾಲೇಜಿನ ದೈಹಿಕ ಉಪನ್ಯಾಸಕ ಸಂಗಮೇಶ ಗೌಡ ಮಧ್ಯೆ ಮಾತಿನ ಚಕಮಕಿ ನಡೆದಿದೆ.
ಹಿಜಾಬ್ ಹಾಗೂ ಕೇಸರಿ ಶಾಲು ಹೊರತು ಪಡಿಸಿ ಹಣೆಗೆ ಕುಂಕುಮ – ನಾಮ ಹಾಕಲು ಯಾಕೆ ಅನುಮತಿಯಿಲ್ಲ ಎಂದು ವಿದ್ಯಾರ್ಥಿ ಪ್ರಶ್ನೆಸಿದ್ದಕ್ಕೆ, ವಿದ್ಯಾರ್ಥಿ ಹಾಗೂ ಉಪನ್ಯಾಸಕರ ಮಧ್ಯೆ ವಾಗ್ವಾದ ನಡೆದಿದ್ದು, ಅನಂತರ ವಿದ್ಯಾರ್ಥಿಯನ್ನು ಸಮಾಧಾನ ಪಡಿಸಿ ತರಗತಿಯೊಳಗೆ ಕಳುಹಿಸಲಾಗಿದೆ. ಕಾಲೇಜ್ ಸುತ್ತಲೂ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.