ಹೊಸ ದಿಗಂತ ವರದಿ, ಮಡಿಕೇರಿ:
ಹಿಜಾಬ್ ಧರಿಸಿ ಬಂಧ ವಿದ್ಯಾರ್ಥಿನಿಯರು ಪ್ರಾಂಶುಪಾಲರೊಂದಿಗೇ ವಾಗ್ವಾದಕ್ಕಿಳಿದ ಘಟನೆ ನಗರದ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶುಕ್ರವಾರ ನಡೆದಿದೆ.
ವಿದ್ಯಾರ್ಥಿನಿಗಳ ಗುಂಪೊಂದು ಹಿಜಾಬ್ ಧರಿಸಿಕೊಂಡೇ ತರಗತಿಗೆ ಬಂದಿದ್ದು, ಹೈಕೋರ್ಟ್ ಆದೇಶ ಇರುವುದರಿಂದ ಹಿಜಾಬ್ ಕಳಚಿಡಲು ಕೊಠಡಿ ಸಿದ್ಧಪಡಿಸಿದ್ದು, ಅಲ್ಲಿ ಇಟ್ಟು ಬರುವಂತೆ ಕಾಲೇಜಿನ ಪ್ರಾಂಶುಪಾಲ ವಿಜಯ್ ಹಾಗೂ ಶಿಕ್ಷಕರು ವಿದ್ಯಾರ್ಥಿನಿಯರಿಗೆ ಸಲಹೆ ಮಾಡಿದರು.
ಆದರೆ ಇದಕ್ಕೊಪ್ಪದ ಮೂವರು ವಿದ್ಯಾರ್ಥಿನಿಯರು ಅದನ್ನು ಲಿಖಿತವಾಗಿ ನೀಡುವಂತೆ ಒತ್ತಾಯಿಸಿದರು. ಮತ್ತೊಂದೆಡೆ ತರಗತಿಗೆ ಹಾಜರಾಗಲು ಬಿಡದಿದ್ದಲ್ಲಿ ತಮಗೆ ಹಾಜರಾತಿ ನೀಡಬೇಕು ಎಂದೂ ಪಟ್ಟು ಹಿಡಿದರು. ಅಲ್ಲದೆ ತಮಗೆ ಆನ್ಲೈನ್ ಕ್ಲಾಸ್ ನಡೆಸುವಂತೆಯೂ ಒತ್ತಾಯಿಸಿದರು. ವಿದ್ಯಾರ್ಥಿನಿಯರಿಗೆ ಪರಿಪರಿಯಾಗಿ ಮನವರಿಕೆ ಮಾಡಲು ಯತ್ನಿಸಿದರೂ ಕೇಳದಿದ್ದಾಗ ಸಿಟ್ಟಾದ ಪ್ರಾಂಶುಪಾಲರು, ವಿದ್ಯಾರ್ಥಿನಿಯರಿಗೆ ಚೆನ್ನಾಗಿ ಬೈದು ಕಾಲೇಜಿನಿಂದ ಹೊರಹೋಗುವಂತೆ ಸೂಚಿಸಿದರು. ಬಂಧಿಸಲು ಸೂಚನೆ: ಆಗಲೂ ವಿದ್ಯಾರ್ಥಿನಿಯರು ವಾಗ್ವಾದಕ್ಕಿಳಿದಾಗ ಸ್ಥಳದಲ್ಲಿದ್ದ ಪೊಲೀಸ್ ಸಿಬ್ಬಂದಿಗಳನ್ನು ಕರೆದು ವಿದ್ಯಾರ್ಥಿನಿಯರನ್ನು ಅರೆಸ್ಟ್ ಮಾಡಿ ಕರೆದೊಯ್ಯುವಂತೆ ಸೂಚಿಸಿದರು. ಅಷ್ಟಾಗುತ್ತಲೇ ಕಾಲೇಜು ಆವರಣದಿಂದ ಹೊರಬಂದ ವಿದ್ಯಾರ್ಥಿನಿಯರು ಗೇಟ್ ಬಳಿ ಕೆಲಕಾಲ ಪ್ರತಿಭಟನೆ ನಡೆಸಿ ಬಳಿಕ ಮನೆಯ ದಾರಿ ಹಿಡಿದರು.