ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಸ್ನಲ್ಲಿ ಪಹಲ್ಗಾಮ್ಗೆ ಹೊರಡುವಾಗ ಮಧ್ಯೆ ಬೆಟ್ಟ ಕುಸಿತವಾಗಿ ವಾಹನವನ್ನು ವೈಷ್ಣೋದೇವಿ ಕಡೆ ತಿರುಗಿಸಲಾಯ್ತು. ಇದರಿಂದಾಗಿ ನಮ್ಮ ಪ್ರಾಣ ಉಳಿಯಿತು ಎಂದಿದ್ದಾರೆ ದೊಡ್ಡಬಳ್ಳಾಪುರದ 90 ಮಂದಿ!
ಹೌದು, ತೂಬಗೆರೆ ಸುತ್ತಮುತ್ತಲಿನ ಗ್ರಾಮದ 90 ಮಂದಿ ಪ್ರವಾಸಿಗರು ಕಾಶ್ಮೀರಕ್ಕೆ ಪ್ರವಾಸಕ್ಕೆ ತೆರಳಿದ್ದು, ಸುರಕ್ಷಿತವಾಗಿದ್ದಾರೆ ಎಂದು ತಿಳಿದು ಬಂದಿದೆ. ಉಗ್ರರು ದಾಳಿ ನಡೆಸಿದ ಪಹಲ್ಗಾಮ್ ಬಳಿಯೇ ಹೋಟೆಲ್ ಬುಕ್ ಮಾಡಿದ್ದ ಇವರೆಲ್ಲರೂ, ದಾರಿಮಧ್ಯೆ ಬೆಟ್ಟ ಕುಸಿತದಿಂದ ಪ್ರವಾಸವನ್ನು ಬದಲಿಸಿಕೊಂಡು ವೈಷ್ಣೋದೇವಿ ದರ್ಶನಕ್ಕೆ ತೆರಳಿದ್ದರು. ಅದೇ ದಿನ ಪ್ರವಾಸಿಗರ ಮೇಲೆ ಉಗ್ರರು ದಾಳಿ ನಡೆಸಿದ್ದರು. ಸದ್ಯ ತೂಬಗೆರೆ ಪ್ರವಾಸಿಗರು ಸುರಕ್ಷಿತವಾಗಿರುವ ಮಾಹಿತಿ ಲಭ್ಯವಾಗಿದೆ.
ದೊಡ್ಡಬಳ್ಳಾಪುರ ತಾಲೂಕಿನ ಸುತ್ತಾಮುತ್ತಲಿನ ತಿರುಮಗೊಂಡನಹಳ್ಳಿ ಹಾಡೋನಹಳ್ಳಿ, ವಡ್ಡರಹಳ್ಳಿ ಲಕ್ಷ್ಮೀದೇವಿಪುರ, ತಿಮ್ಮೋಜನಹಳ್ಳಿ, ತೂಬಗೆರೆ, ಹೀರೆಮುದ್ದೇನಹಳ್ಳಿ, ನೆಲಗುದಿಗೆ ಗ್ರಾಮಗಳಿಂದ 90 ಮಂದಿ 9 ದಿನಗಳ ಜಮ್ಮು ಕಾಶ್ಮೀರ ಪ್ರವಾಸ ಕೈಗೊಂಡಿದ್ದಾರೆ.
ಇವರೆಲ್ಲರೂ ಏಪ್ರಿಲ್ 19ರಂದು ಟ್ರಾವೆಲ್ ಏಜೆನ್ಸಿ ಮೂಲಕ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೆಹಲಿಗೆ ವಿವಿಧ ತಂಡಗಳಾಗಿ ತೆರಳಿದ್ದಾರೆ. ಅಮೃತಸರದಲ್ಲಿ ಒಟ್ಟಾಗಿ ಸೇರಿದ ನಾವು ಕಾಶ್ಮೀರದ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ಲಾನ್ ಹೊಂದಿದ್ದೆವು. ಕಾರಣಾಂತರದಿಂದ ಎರಡು ದಿನಗಳ ಕಾಲ ಪ್ರವಾಸ ಮುಂದಕ್ಕೆ ಹೋದ ಕಾರಣ ಇವರು ಕಾಶ್ಮೀರಕ್ಕೆ ಹೋಗುವ ಬದಲು ಅಮೃತಸರದಲ್ಲಿಯೇ ಪ್ರೇಕ್ಷಣೀಯ ಸ್ಥಳಗಳನ್ನು ನೋಡಿಕೊಂಡು, ಬಳಿಕ ಶ್ರೀನಗರಕ್ಕೆ ಪ್ರವಾಸ ತೆರಳಿದ್ದೆವು ಎಂದು ಪ್ರವಾಸಿಗರು ಮಾಹಿತಿ ನೀಡಿದ್ದಾರೆ.