ಹೊಸದಿಗಂತ ವರದಿ, ಮಂಗಳೂರು:
ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಹಿಂದು ಸಂಘಟನೆ ಕಾರ್ಯಕರ್ತರು, ಮುಖಂಡರು, ಬಂಧುಗಳು, ಅಭಿಮಾನಿಗಳು, ನಾಗರಿಕರ ಕಂಬನಿಯ ನಡುವೆ ದಕ್ಷಿಣ ಕನ್ನಡ ಜಿಲ್ಲೆಯ ಕಾವಳಮೂಡೂರು ಗ್ರಾಮದ ಕಾರಿಂಜಬೈಲು ಪುಳಿಮಜಲುನಲ್ಲಿರುವ ಮೂಲ ಮನೆಯ ಪಕ್ಕದ ಗದ್ದೆದಲ್ಲಿ ಹಿಂದು ಕಾರ್ಯಕರ್ತ ಸುಹಾಸ್ ಪಂಚಭೂತಗಳಲ್ಲಿ ಲೀನರಾದರು.
ಈ ಸಂದರ್ಭ ಹಿಂದುಪರ ಸಂಘಟನೆ ಕಾರ್ಯಕರ್ತರ ಘೋಷಣೆ ಮುಗಿಲುಮುಟ್ಟಿತು. ಪಾರ್ಥಿವ ಶರೀರ ಮನೆಗೆ ತಲುಪುತ್ತಿದ್ದಂತೆ ಅಂತಿಮ ದರುಶನಕ್ಕೆ ಜನಸ್ತೋಮವೇ ಹರಿದು ಬಂತು. ಬಂಟ್ವಾಳ ಸಹಿತ ಜಿಲ್ಲೆಯ ವಿವಿಧ ಭಾಗಗಳಿಂದ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಅಗಮಿಸಿದ್ದರು.
ವಿಶ್ವ ಹಿಂದು ಪರಿಷತ್ನ ರಾಜ್ಯ ಕಾರ್ಯದರ್ಶಿ ಮಿಲಿಂದ ಪರಾಂಡೆ, ಆರ್ಎಸ್ಎಸ್ ಪ್ರಮುಖರಾದ ಡಾ. ಪ್ರಭಾಕರ ಭಟ್ ಕಲ್ಲಡ್ಕ, ಶಾಸಕರಾದ ಹರೀಶ್ ಪೂಂಜಾ, ಡಾ.ವೈ. ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ಭಾಗಿರಥಿ ಮುರುಳ್ಯ, ಶಾಸಕ ಯಶ್ಪಾಲ್ ಸುವರ್ಣ, ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು, ಮಾಜಿ ಶಾಸಕ ಸಂಜೀವ ಮಠಂದೂರು, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ವಿವಿಧ ಸಂಘಟನೆಗಳ ಮುಖಂಡರಾದ ಶರಣ್ ಪಂಪ್ ವೆಲ್, ಅರುಣ್ ಕುಮಾರ್ ಪುತ್ತಿಲ, ಪುನೀತ್ ಕೆರೆಹಳ್ಳಿ, ಹರಿಕೃಷ್ಣ ಬಂಟ್ವಾಳ, ಕಾವಳ ಮೂಡೂರು ಗ್ರಾಮ ಪಂಚಾಯತ್ ಅಧ್ಯಕ್ಷ ಅಜಿತ್ ಶೆಟ್ಟಿ, ಮುರಳೀಕೃಷ್ಣ ಹಂಸತಡ್ಕ, ಮಹೇಶ್ ಶೆಟ್ಟಿ ತಿಮರೋಡಿ, ಚೆನ್ನಪ್ಪ ಕೋಟ್ಯಾನ್, ರವೀಶ್ ಶೆಟ್ಟಿ ಕರ್ಕಳ, ಸುದರ್ಶನ್ ಬಜ, ಡೊಂಬಯ ಅರಳ ಮೊದಲಾದವರು ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ಆರಂಭದಿಂದ ಕೊನೆಯವರೆಗೂ ಕುಟುಂಬದೊಂದಿಗಿದ್ದು ಅಂತ್ಯಕ್ರಿಯೆಯ ಸಂಪೂರ್ಣ ಉಸ್ತುವಾರಿ ವಹಿಸಿದ್ದರು.