ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದ 75ನೇ ಸ್ವಾತಂತ್ರ್ಯ ಮಹೋತ್ಸವದ ಸಂದರ್ಭ ಆ.15ರಂದು ಉತ್ತರಪ್ರದೇಶದ ಮುಸ್ಲಿಮರು ತಮ್ಮ ಮನೆ ಮತ್ತು ಮಸೀದಿಗಳಲ್ಲಿ ರಾಷ್ಟ್ರಧ್ವಜ ಹಾರಿಸಿ ರಾಷ್ಟ್ರೀಯ ಉತ್ಸವವಾಗಿ ಆಚರಿಸುವಂತೆ ಅನೇಕ ಮುಸ್ಲಿಂ ಮೌಲ್ವಿಗಳು ಮುಸ್ಲಿಮರನ್ನು ಆಗ್ರಹಿಸಿದ್ದಾರೆ. ಶುಕ್ರವಾರದ ಪ್ರಾರ್ಥನೆಯ ಸಂದರ್ಭ, ಮುಸ್ಲಿಮರು ತಮಗೆ ಜನ್ಮ ನೀಡಿದ ದೇಶಕ್ಕೆ ನಿಷ್ಠರಾಗಿ, ರಾಷ್ಟ್ರವನ್ನು ಪ್ರೀತಿಸಬೇಕೆಂದು ಮೌಲ್ವಿಗಳು ಆಗ್ರಹಿಸಿದ್ದಾರೆ.
ಶರಿಯಾ ಕಾನೂನು ಕೂಡಾ ಇದನ್ನು ಒತ್ತಿ ಹೇಳಿದೆ ಎಂದು ಅವರು ನುಡಿದರು. ಮುಜಾಫರ್ನಗರ ಮತ್ತು ಮೀರತ್ ಜಿಲ್ಲೆಗಳಲ್ಲಿನ ಮಸೀದಿಗಳಲ್ಲಿ ಅನೇಕ ಮೌಲ್ವಿಗಳು ದೇಶಭಕ್ತಿಯ ಮತೋಪದೇಶಗಳನ್ನು ನೀಡಿದರು. ನಾವು ಭಾರತೀಯರು,ಇದು ನಮ್ಮ ಭೂಮಿ. ನಾವು ಈ ಭೂಮಿ ಮತ್ತು ರಾಷ್ಟ್ರವನ್ನು ಪ್ರೀತಿಸಲೇಬೇಕು.ಅಗತ್ಯ ಬಿದ್ದರೆ ದೇಶಕ್ಕಾಗಿ ಬಲಿದಾನಕ್ಕೂ ಸಿದ್ಧರಿರಬೇಕು ಎಂದು ಮುಜಾಫರ್ನಗರದ ದಕ್ಷಿಣದ ಖಾಲಾಪಾರ್ ಪ್ರದೇಶದ ಮೌಲ್ವಿ ಅಬಿದ್ ಮೊಹಮ್ಮದ್ ಹೇಳಿದ್ದಾರೆ.