ಹೊಸದಿಗಂತ ರಾಣೇಬೆನ್ನೂರು:
ಪ್ರಧಾನಿ ನರೇಂದ್ರ ಮೋದಿಯವರು ಜೂ.9ರಂದು 3ನೇ ಬಾರಿಗೆ ಮತ್ತೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿರುವ ಹಿನ್ನಲೆಯಲ್ಲಿ ರಾಣೇಬೆನ್ನೂರ ತಾಲೂಕಿನ ಹಲಗೇರಿ ಗ್ರಾಮದ ನರೇಂದ್ರ ಮೋದಿ ಟೀ ಹೋಟೆಲ್ ನಲ್ಲಿ ಹೋಳಿಗೆ, ಚಿತ್ರಾನ್ನ, ರೊಟ್ಟಿ, ಪಲ್ಯ, ಅನ್ನ ಸಾಂಬಾರ, ಬಜಿ ಸೇರಿದಂತೆ ಒಟ್ಟು 4 ಸಾವಿರ ಜನರಿಗೆ ಊಟದ ವ್ಯವಸ್ಥೆ ಮಾಡಲಾಗುವುದು. ಹಾವೇರಿ ಜಿಲ್ಲೆಯ ಎಲ್ಲ ಬಿಜೆಪಿ ಮಾಜಿ ಶಾಸಕರು ಹಾಗೂ ಬಿಜೆಪಿ ಮುಖಂಡರುಗಳನ್ನು ಮುಖ್ಯ ಅತಿಥಿಗಳನ್ನಾಗಿ ಆಹ್ವಾನಿಸಲಾಗಿದೆ ಎಂದು ನರೇಂದ್ರ ಮೋದಿ ಟೀ ಸ್ಟಾಲ್ ಮಾಲೀಕ ಹಾಗೂ ಮೋದಿ ಅಭಿಮಾನಿ ವೀರೇಶ ಉಜ್ಜನಗೌಡ್ರ ಹೇಳಿದರು.
ತಾಲೂಕಿನ ಹಲಗೇರಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಮೋದಿಜಿಯವ ಅಪ್ಪಟ ಅಭಿಮಾನಿಯಾಗಿದ್ದು, ಮೋದಿಯವರೇ ದೇಶದ ಉದ್ಧಾರಕ ಎಂದು ಭಾವಿಸಿರುವೆ. ಕೇಂದ್ರದಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಬಂದಿದ್ದರೆ 2ಸಾವಿರ ಜನರಿಗೆ ಉಚಿತ ಬೆಣ್ಣೆ ದೋಸೆ ನೀಡಲು ಮುಂದಾಗಿದ್ದೆ ಆದರೆ ಸ್ಥಾನಗಳ ಸಂಖ್ಯೆ ಕಡಿಮೆಯಾಗಿದ್ದು ಬೇಸರವೆನಿಸಿತು.
ಮೋದಿಯವರು ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ದೃಶ್ಯಾವಳಿಗಳನ್ನು ಎಲ್ ಇ ಡಿ ಪರದೆಯ ಮೂಲಕ ನೇರವಾಗಿ ನೋಡುವ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ವಿರೇಶ ವಿವರಿಸಿದರು.