ಹೊಸದಿಗಂತ ವರದಿ ಮಡಿಕೇರಿ:
ಹಳೆಯ ಶೌಚಾಲಯದ ಗುಂಡಿಗೆ ಬಿದ್ದ ಮಹಿಳೆ ಮತ್ತು ಅವರನ್ನು ರಕ್ಷಿಸಲು ಹೋದ ನೆರೆಮನೆಯ ವ್ಯಕ್ತಿ ಉಸಿರುಗಟ್ಟಿ ಮೃತಪಟ್ಟ ದಾರುಣ ಘಟನೆ ಸೋಮವಾರಪೇಟೆ ತಾಲೂಕಿನ ಹೊಸತೋಟ ಸಮೀಪದ ಗರಗಂದೂರು ‘ಬಿ’ ಗ್ರಾಮದಲ್ಲಿ ನಡೆದಿದೆ.
ಸೋಮವಾರ ಸಂಜೆ ವೇಳೆ ಗ್ರಾಮದ ನಿತ್ಯ ಎಂಬ ಮಹಿಳೆ ಮನೆಯ ಸಮೀಪದ ಹಳೆಯ ಶೌಚಾಲಯದ ಗುಂಡಿಯ ಬಳಿ ಹೋಗುತ್ತಿದ್ದಾಗ, ಏಕಾಏಕಿ ಮೇಲ್ಭಾಗದ ಮಣ್ಣು ಮತ್ತು ಕಾಂಕ್ರೀಟ್ ಕುಸಿದು ಅವರು ಗುಂಡಿಯೊಳಗೆ ಬಿದ್ದಿದ್ದಾರೆ. ಅವರ ಕೂಗು ಕೇಳಿದ ನೆರೆಮನೆಯ ಜನಾರ್ದನ ಎಂಬವರು ಕೂಡಲೇ ಧಾವಿಸಿ ರಕ್ಷಿಸಲು ಗುಂಡಿಯೊಳಗೆ ಇಳಿದಿದ್ದಾರೆ.
ಆದರೆ ವರ್ಷಗಳಿಂದ ಮುಚ್ಚಿದ್ದ ಆ ಗುಂಡಿಯಲ್ಲಿ ಸಂಗ್ರಹವಾಗಿದ್ದ ವಿಷಕಾರಿ ಅನಿಲವನ್ನು ಸೇವಿಸಿದ ಕಾರಣ ಇಬ್ಬರೂ ಸ್ಥಳದಲ್ಲೇ ಉಸಿರುಗಟ್ಟಿ ಸಾವಿಗೀಡಾಗಿದ್ದಾರೆ.

ಇದನ್ನೂ ಓದಿ:
ಮಾಹಿತಿ ತಿಳಿದ ತಕ್ಷಣ ಸೋಮವಾರಪೇಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಮೃತದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಘಟನೆಯ ವಿಷಯ ತಿಳಿದ ಮಡಿಕೇರಿ ಶಾಸಕ ಮಂಥರ್ ಗೌಡ ಅವರು ಆಸ್ಪತ್ರೆಗೆ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.



