ಹೊಸ ದಿಗಂತ ವರದಿ, ರಾಯಚೂರು:
ಹಣ್ಣು, ತರಕಾರಿ ಸೇರಿದಂತೆ ವಿವಿಧ ಫಲ-ಪುಷ್ಪಗಳಲ್ಲಿ ಕಲಾಕೃತಿಗಳಿಲ್ಲದ ಕೇವಲ ನಾಲ್ಕಾರು ಕಲಾಕೃತಿಗಳನ್ನು ಇಟ್ಟು ತೋಟಗಾರಿಕೆ ಇಲಾಖೆ ಆಯೋಜನೆ ಮಾಡಿರುವ ಫಲಪುಷ್ಪ ಪ್ರದರ್ಶನ ಸಂಪೂರ್ಣವಾಗಿ ವಿಫಲವಾಗಿರುವುದು ಕಂಡುಬಂದಿತು.
ನಗರದ ತೋಟಗಾರಿಕೆ ಇಲಾಖೆಯ ಚಿಕ್ಕ ಆವರಣದಲ್ಲಿ ಏರ್ಪಡಿಸಿರುವ ಈ ಫಲ ಪುಷ್ಪಪ್ರದರ್ಶನದಲ್ಲಿ ಹೂಗಳಲ್ಲಿ ರೋವರ್, ಚಮದ್ರಯಾನದ ರಾಕೆಟ್, ಶಿವಲಿಂಗ, ಬಿದಿರಿನಲ್ಲಿ ತಯಾರಿಸಿರುವ ವಿವಿಧ ವಸ್ತುಗಳಿಂದ ತಯಾರಿಸಿರುವ ಗಣೇಶನ ಮೂರ್ತಿ, ಆನೆ ಮತ್ತು ಮರಿ ಕಾಲಾಕೃತಿಗಳನ್ನು ಮಾಡಲಾಗಿದೆ.
ರೈತರು ಬೆಳೆದ ಬಾಳೆ ಗೊನೆ, ತಾಳೆ ಗೊನೆ, ಪಪ್ಪಾಯ, ಪೇರತಲ, ದಾಳಿಂಬೆ, ದ್ರಾಕ್ಷೆ, ಚಿಕ್ಕು ಸೇರಿದಂತೆ ಕೆಲ ಹಣ್ಣುಗಳು ಮತ್ತು ಹೂಗಳನ್ನು ಪ್ರದರ್ಶನಕ್ಕೆ ಇಟ್ಟಿರುವುದನ್ನು ಬಿಟ್ಟರೆ ಜನತೆಯನ್ನು ಆಕರ್ಷಿಸುವ ಯಾವುದೇ ಕಲಾಕೃತಿಗಳನ್ನು ಈ ಫಲಪುಷ್ಪಪ್ರದರ್ಶನದಲ್ಲಿ ಕಂಡುಬರುವುದೇಯಿಲ್ಲ.
ಬೇರೆಡೆಗಳಲ್ಲಿ ಗಲ್ಲಂಗಡಿ, ಕುಂಬಳಕಾಯಿ, ಗಜ್ಜರಿ, ಹಾಗಲಕಾಯಿ, ಮೂಲಂಗಿ ಹಾಗೂ ವಿವಿಧ ತರಕಾರಿಗಳನ್ನು ಬಳಸಿಕೊಂಡು ಜನರನ್ನು ಸೆಳೆಯುವಂತಹ ಕಲಾಕೃತಿಗಳನ್ನು ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತರ ಕಲಾಕೃತಿಗಳು, ಚಿತ್ರನಟರ, ದೇಶದ ಹೆಮ್ಮೆ ಪುತ್ರೆನಿಸಿಕೊಂಡವರ ಕಲಾಕೃತಿಗಳನ್ನು ಕಲಾವಿದರು ನಿರ್ಮಿಸಿದ್ದನ್ನು ಕಾಣಬಹುದಾಗಿದೆ ಇದಲ್ಲದೆ ಸಿರಿ ಧಾನ್ಯಗಳಲ್ಲಿಯೂ ಅನೇಕ ಕಲಾಕೃತಿಗಳನ್ನು ಕಂಡುಬರುತ್ತಿದ್ದವು ಆದರೆ ರಾಯಚೂರಿನ ಈ ಫಲಪುಷ್ಪ ಪ್ರದರ್ಶನದಲ್ಲಿ ಇಂತಹ ಒಂದೇ ಒಂದು ಕಲಾಕೃತಿಗಳು ಕಂಡುಬರಲಿಲ್ಲ.
ತೋಟಗಾರಿಕೆ ಅಧಿಕಾರಿಗಳು ಈ ಕುರಿತು ಮಾಹಿತಿ ನೀಡಿದ ಸಂದರ್ಭದಲ್ಲಿ ಫಲಪುಷ್ಪ ಪ್ರದರ್ಶನ ಅತ್ಯಾಕರ್ಷಕವಾಗಿ ಆಯೋಜನೆ ಮಾಡುತ್ತಾರೆ. ಪ್ರತಿ ನಿತ್ಯಾ ಸಾವಿರಾರು ಸಾರ್ವಜನಿಕರು ಸರತಿ ಸಾಲಿನಲ್ಲಿ ನಿಂತುಕೊಂಡು ವೀಕ್ಷಣೆ ಮಾಡುತ್ತಾರೆ ಎಂದುಕೊಳ್ಳಲಾಗಿತ್ತು.ಆದರೆ ಈಗ ಆಯೋಜನೆ ಮಾಡಿರುವುದನ್ನು ಗಮನಿಸಿದರೆ ಫಲಪುಷ್ಪ ಪ್ರದರ್ಶನ ಕಾಟಾಚಾರಕ್ಕೆ ಮಾಡಲಾಗಿದೆ ಎಂದೆನಿಸದೇ ಇರದು.
ತೋಟಗಾರಿಕೆ ಇಲಾಖೆ ಅತ್ಯಂತ ಸೀಮಿತ ಕಲಾಕೃತಿಗಳು ಮತ್ತು ಜನಾಕರ್ಷಕವಾಗಿ ಆಯೋಜನೆ ಮಾಡದೇ ಮೂರು ದಿನಗಳಕಾಲ ಏರ್ಪಡಿಸುವ ಬದಲಿಗೆ ಒಂದೇ ದಿನ ಆಯೋಜನೆ ಮಾಡಿದ್ದರು ಸಾಕಾಗುತ್ತಿತ್ತು ಎಂದು ಅನೇಕ ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸುತ್ತಿರುವುದು ಕಂಡುಬಂದಿತು.
ಫಲಪುಷ್ಪ ಪ್ರದರ್ಶನದಲ್ಲಿ ಹೆಚ್ಚಿನ ಕಲಾಕೃತಿಗಳು ಇಲ್ಲ ಎನ್ನುವುದು ತಿಳಿದ ಸಾರ್ವಜನಿಕರು ವೀಕ್ಷಣೆಗೆ ಬರುವುದಕ್ಕೂ ಹಿಂದೇಟು ಹಾಕುತ್ತಿರುವುದು ನಗರದಲ್ಲಿ ಅಲ್ಲಲ್ಲಿ ಮಾತನಾಡುತ್ತಿರುವುದು ಕೇಳಿಬಂದವು. ಪ್ರದರ್ಶನ ಸ್ಥಳಕ್ಕೆ ಹೋದಾಗಲೂ ಅಲ್ಲೊಬ್ಬರು ಇಲ್ಲೊಬ್ಬರು ವೀಕ್ಷಿಸುತ್ತಿರುವುದು ಕಂಡುಬಂದಿತು. ಸಾರ್ವಜನಿಕರಿಗಿಂತ ಇಲಾಖೆಯ ಸಿಬ್ಬಂದಿಗಳೇ ಒಂದಿಬ್ಬರು ಹೆಚ್ಚಿರುವುದು ಕಂಡುಬಂದಿತು.