ಹೊಸ ದಿಗಂತ ವರದಿ, ಮಂಡ್ಯ :
ತಾಲೂಕಿನ ಕೆರಗೋಡು ಗ್ರಾಮದಲ್ಲಿ ಸ್ಥಾಪಿಸಿರುವ 108 ಅಡಿ ಶ್ರೀ ಆಂಜನೇಯ ಅರ್ಜುನ ಧ್ವಜಸ್ತಂಭ ತೆರವಿಗೆ ಮುಂದಾಗಿರುವುದರ ವಿರುದ್ಧ ಗ್ರಾಮವನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
ಗೌರಿಶಂಕರ ಸೇವಾ ಟ್ರಸ್ಟ್ ವತಿಯಿಂದ ಗ್ರಾಮದ ಶ್ರೀ ಆಂಜನೇಯಸ್ವಾಮಿ ದೇವಾಲಯದ ಮುಂದೆ 40 ಅಡಿ ಎತ್ತರದ ಧ್ವಜಸ್ತಂಭ ನಿರ್ಮಾಣ ಮಾಡಲು ಮುಂದಾಗಿದ್ದರು. ಈ ವಿಚಾರ ತಿಳಿದ ಕೆಲವರು ನಾವೂ ಅದಕ್ಕೆ ಸಹಕಾರ ನೀಡುತ್ತೇವೆ 60 ಅಡಿ ಧ್ವಜಸ್ತಂಭ ನಿರ್ಮಾಣ ಮಾಡುವಂತೆ ಸಲಹೆ ನೀಡಿದ್ದರು.
ಗ್ರಾಮದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಶಾಸಕ ಪಿ. ರವಿಕುಮಾರ್ ಅವರು ಈ ಸ್ಥಳದಲ್ಲಿ ಹೈಟೆಕ್ ಬಸ್ ನಿಲ್ದಾಣ ನಿರ್ಮಿಸುವ ಜೊತೆಗೆ ಗ್ರಾಮವನ್ನು ಸಿಂಗಪೂರ್ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲಾಗುವುದು. ಒಂದು ವೇಳೆ ಈ ಸ್ಥಳದಲ್ಲಿ ಧ್ವಜಸ್ತಂಭ ನಿರ್ಮಾಣ ಮಾಡುವುದರಿಂದ ಬಸ್ ನಿಲ್ದಾಣಕ್ಕೆ ತೊಂದರೆಯಾಗಬಹುದು ಎಂದು ಸಲಹೆ ನೀಡಿದರು.
ಶಾಸಕರ ಅಭಿಪ್ರಾಯಕ್ಕೆ ಮನ್ನಣೆ ನೀಡಿ ಯುವಕರು, ತಾವು ತೋರಿಸಿದ ಸ್ಥಳದಲ್ಲೇ ನಾವು ಧ್ವಜಸ್ತಂಭ ನಿರ್ಮಾಣ ಮಾಡುವುದಾಗಿ ಹೇಳಿ, ಸ್ಥಳ ನಿಯೋಜನೆ ಮಾಡುವಂತೆ ಮನವಿ ಮಾಡಿದರು.
ಮೇಲ್ಬಾಗದ ರಂಗಮಂದಿರ ಆವರಣದಲ್ಲಿ ಧ್ವಜಸ್ತಂಭ ನಿರ್ಮಾಣ ಮಾಡುವಂತೆ ಸ್ವತಃ ಶಾಸಕರೇ ತಿಳಿಸಿದರು. ಶಾಸಕರ ಸಲಹೆ ಮೇರೆಗೆ ಟ್ರಸ್ಟ್ ವತಿಯಿಂದ ನಿರ್ಮಿಸಲುದ್ದೇಶಿಸಿದ್ದ 60 ಅಡಿ ಧ್ವಜಸ್ತಂಭಕ್ಕೆ ಬದಲಾಗಿ ಸುತ್ತಮುತ್ತಲ ಗ್ರಾಮಸ್ಥರ ಸಹಕಾರದಿಂದ ಸುಮಾರು 3.50 ಲಕ್ಷ ರೂ. ವೆಚ್ಚದಲ್ಲಿ 108 ಅಡಿ ಧ್ವಜಸ್ತಂಭ ನಿರ್ಮಾಣ ಮಾಡಿ ಅದಕ್ಕೆ ಶ್ರೀ ಆಂಜನೇಯ ಅರ್ಜುನ ಧ್ವಜಸ್ತಂಭ ಎಂದು ಹೆಸರಿಸಲಾಗಿದೆ.
ಇತ್ತೀಚೆಗೆ ಕಾಡಾನೆ ಹಿಡಿಯುವ ಕಾರ್ಯಾಚಾರಣೆ ವೇಳೆ ದಸರಾ ಅಂಬಾರಿ ಹೊರುತ್ತಿದ್ದ ಅರ್ಜುನ ಸಾವಿಗೀಡಾಗಿದ್ದು, ಅದರ ನೆನಪಿಗಾಗಿ ಶ್ರೀ ಆಂಜನೇಯ ಅರ್ಜುನ ಧ್ವಜಸ್ತಂಭ ಎಂದು ನಾಮಕರಣ ಮಾಡಲಾಗಿದೆ ಎಂದು ಟ್ರಸ್ಟ್ ಸದಸ್ಯರು ತಿಳಿಸಿದರು.