ಸರ್ವರಿಗೂ ಸೂರು ಕಲ್ಪಿಸುವ ಗುರಿಯೊಂದಿಗೆ ರಾಜ್ಯದಲ್ಲಿ ವಸತಿ ಕ್ರಾಂತಿ: ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು

ಹೊಸದಿಗಂತ ವರದಿ, ಬಳ್ಳಾರಿ:

ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಕಂಪ್ಲಿ ಪಟ್ಟಣದಲ್ಲಿ 32.87 ಕೋಟಿ ರೂ.ವೆಚ್ಚದಲ್ಲಿ 500 ಮನೆಗಳ ನಿರ್ಮಾಣಕ್ಕೆ ಸಾರಿಗೆ,ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅವರು ಕಂಪ್ಲಿ ಪಟ್ಟಣದಲ್ಲಿ ಬುಧವಾರ ಭೂಮಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಗುಣ ಮಟ್ಟದಲ್ಲಿ ಯಾವುದೇ ರೀತಿಯಲ್ಲಿ ರಾಜಿಯಾಗದೆ ನಿಗದಿತ ಸಮಯದಲ್ಲಿ ಈ ಕೆಲಸ ಮುಗಿಸಿ ಜನರಿಗೆ ಮನೆ ಸಿಗುವಂತೆ ಮಾಡಲು ಈಗಾಗಲೇ ಅಧಿಕಾರಿಗಳಿಗೆ ಸೂಚಿಸಲಾಗಿದೆ,
ಬಡವರಿಗೆ ಸೂರು ಒದಗಿಸುವುದು ನಮ್ಮ ಸರ್ಕಾರದ ಪ್ರಮುಖ ಅದ್ಯತೆಗಳಲ್ಲಿ ಒಂದು, ಒಬ್ಬ ವ್ಯಕ್ತಿ ಗೌರವಯುತವಾಗಿ ಬದುಕಲು ಅನ್ನ, ನೀರು, ಸೂರು ಅತಿಮುಖ್ಯ. ಅದನ್ನ ಬಡವರಿಗೆ ಕೊಡುವ ಜವಾಬ್ದಾರಿ ಸರ್ಕಾರದ್ದು. ಈ ನಿಟ್ಟಿನಲ್ಲಿ ಅತ್ಯಂತ ನಿಷ್ಠೆಯಿಂದ, ಬಡವರ ಪರ ಕಾಳಜಿ ಇಟ್ಟುಕೊಂಡು ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ ಎಂದರು.
ರಾಜ್ಯದ ಸ್ಲಂಗಳಲ್ಲಿ 2.80ಲಕ್ಷ ಮನೆಗಳ ಬೇಡಿಕೆ: ರಾಜ್ಯದಲ್ಲಿ ಸುಮಾರು 2,800 ಸ್ಲಮ್ ಗಳಿದ್ದು, 2.80 ಲಕ್ಷ ಮನೆಗಳ ಬೇಡಿಕೆ ಇದೆ. ಈ ನಿಟ್ಟಿನಲ್ಲಿ ಈ ಹಿಂದೆ 83,119 ಮನೆಗಳ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಂಡು, ಸುಮಾರು 50 ಸಾವಿರ ಮನೆಗಳ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಸುಮಾರು 33 ಸಾವಿರ ಮನೆಗಳ ಕಾಮಗಾರಿ ಪ್ರಗತಿಯಲ್ಲಿದೆ ಎಂದರು.
ಇದೀಗ ಸರ್ಕಾರದಿಂದ ಹೊಸ ಪ್ಯಾಕೇಜ್ ನಲ್ಲಿ ಸುಮಾರು 6,516 ಕೋಟಿ ವೆಚ್ಚದಲ್ಲಿ 97,134 ಮನೆಗಳ ನಿರ್ಮಾಣಕ್ಕೆ ಕಾರ್ಯಾದೇಶ ನೀಡಲಾಗಿದೆ,
ಹೀಗೆ ಬಡವರಿಗೆ ಸೂರು ನೀಡುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಮಹತ್ವದ ಹೆಜ್ಜೆ ಇಡುತ್ತಿದ್ದು, ಕಾಮಗಾರಿಗಳನ್ನ ಆದ್ಯತೆ ಮೇಲೆ ಮುಗಿಸುವ ಕೆಲಸ ನಡೆಯುತ್ತಿದೆ ಎಂದರು.
ಜಿಲ್ಲಾ ಉಸ್ತುವಾರಿಯಾಗಿ ಜಿಲ್ಲೆಗೆ ಕಾಲಿಟ್ಟಿರುವುದು ಅಭಿವೃದ್ಧಿಗಾಗಿ: ಶ್ರೀರಾಮುಲು ಈ ಜಿಲ್ಲೆಗೆ ಕಾಲಿಟ್ಟಿರೋದು ಅಭಿವೃದ್ಧಿಗಾಗಿ. ಮತ್ತೆ ಹೇಳ್ತೇನೆ, ಅಭಿವೃದ್ಧಿಗಾಗಿ ಮಾತ್ರ ನಾನು ಇಲ್ಲಿದ್ದೇನೆ. ಬೇರೆ ಯಾವುದಕ್ಕೂ ಅಲ್ಲ. ಅಭಿವೃದ್ಧಿ ವಿಷಯದಲ್ಲಿ ಯಾರು ರಾಜಕಾರಣ ಮಾಡೋದು ಬೇಡ,
ಅಭಿವೃದ್ಧಿ ವಿಷಯದಲ್ಲಿ ಜನರು ಬಿಟ್ಟರೆ ಮತ್ತೇನು ಇರಬಾರದು. ಪಕ್ಷ, ರಾಜಕಾರಣ, ಇವೆಲ್ಲ ಚುನಾವಣೆಗೆ ಇಟ್ಟುಕೊಳ್ಳೋಣ. ಕೆಲಸದ ವಿಷಯದಲ್ಲಿ, ಅಭಿವೃದ್ಧಿ ವಿಷಯದಲ್ಲಿ ಎಲ್ಲರೂ ಒಟ್ಟಾಗಿ ಕೆಲಸ ಮಾಡಿದರೆ, ಜನರಿಗೆ , ಊರಿಗೆ ಒಳ್ಳೆಯದಾಗುತ್ತೆ ಎನ್ನೋದು ಮರೆಯಬಾರದು. ಇದನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದು, ದೇವರಾಜು ಅರಸು ಅವರ ಹುಟ್ಟೂರು ಕಲ್ಲಹಳ್ಳಿಯ ತೆಂಗಿನ ತೋಟದ ಕಥೆಯನ್ನು ಉದಾರಣೆ ನೀಡಿದರು.
ಕಂಪ್ಲಿಯಲ್ಲಿರುವ ಸಕ್ಕರೆ ಕಾರ್ಖಾನೆಗೆ ಈ ತಿಂಗಳ ಅಂತ್ಯದೊಳಗೆ ಕಾಯಕಲ್ಪಕ್ಕೆ ಕ್ರಮವ ಹಿಸಲಾಗುವುದು,
ಈ ಭಾಗದ ಜನರಿಗೆ ಕಬ್ಬು ಬೆಳೆಯುವುದಕ್ಕಾಗಿ ಬೀಜ ಹಾಗೂ ಇನ್ನೀತರ ಸಾಮಗ್ರಿಗಳನ್ನು ಶೀಘ್ರ ವಿತರಿಸಲಾಗುವುದು.ಮುಂದಿನ ವರ್ಷದೊಳಗೆ ಈ ಕಾರ್ಖಾನೆಯಲ್ಲಿ ಕಬ್ಬು ನುರಿಸಬೇಕು ಎನ್ನುವ ಉದ್ದೇಶ ಹೊಂದಲಾಗಿದೆ. ಈ ಮೂಲಕ ಈ ಭಾಗದಲ್ಲಿ ನಿರುದ್ಯೋಗಿಗಳಿಗೆ ಉದ್ಯೋಗ ಕೊಡುವ ಕೆಲಸ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಕಂಪ್ಲಿ ಪುರಸಭೆ ಅಧ್ಯಕ್ಷೆ ಶಾಂತಲಾ,ಉಪಾಧ್ಯಕ್ಷೆ ನಿರ್ಮಲಾ, ತಹಸೀಲ್ದಾರ್ ಗೌಸಿಯಾಬೇಗಂ, ಕಂಪ್ಲಿ ಪುರಸಭೆ ಮುಖ್ಯಾಧಿಕಾರಿ ಶಿವಲಿಂಗಪ್ಪ,ಕೊಳಗೇರಿ ಅಭಿವೃದ್ಧಿ ಮಂಡಳಿಯ ಎಇಇ ಕೃಷ್ಙಾರೆಡ್ಡಿ ಸೇರಿದಂತೆ ಪುರಸಭೆ ಸದಸ್ಯರು ಹಾಗೂ ಮುಖಂಡರು ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!