ಹೊಸದಿಗಂತ ವರದಿ, ಚಾಮರಾಜನಗರ :
ಬಜರಂಗದಳ ಈ ದೇಶದ ಅವಿಭಾಜ್ಯ ಅಂಗ. ರಾಮನ ಬಂಟ ಹನುಮನನ್ನೇ ಕಾಂಗ್ರೆಸ್ ಬೇಡ ಎಂದರೆ ಹೇಗೆ..? ಎಂದು ಚಾಮರಾಜನಗರ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಜಿಲ್ಲೆಯಲ್ಲಿ ಚುನಾವಣಾ ಪ್ರಚಾರ ನಡೆಸಿ ಬಳಿಕ ಮಾಧ್ಯಮದರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದವರು ಒಂದೊಂದು ದಿನ ಒಂದೊಂದು ರೀತಿ ಮಾತನಾಡುತ್ತಾರೆ. ಇದೇನಾ 75 ವರ್ಷಗಳ ಕಾಲ ಆಡಳಿತ ನಡೆಸಿದವರ ರೀತಿ..!. ದೇವರು, ಸಂಪ್ರದಾಯಗಳೇ ಬೇಡ ಎಂದರೆ ಈ ದೇಶಕ್ಕೆ ಭವಿಷ್ಯ ಉಳಿಯುತ್ತಾ ಎಂದು ಕಿಡಿಕಾರಿದರು.
ಸಂಪ್ರದಾಯಗಳು ಭಾರತೀಯರ ಕೊಡುಗೆಯಾಗಿದೆ. ರಾಮನ ಭಕ್ತ ಹನುಮಂತನೂ ಬೇಡ ಅಂದ್ರೆ ಹೇಗೆ?. ಇವರ ಮನೇಲಿ ಪೂಜೆ ಮಾಡಲ್ವಾ. ಕುಂಕುಮ ಹಾಕಲ್ವಾ. ವಿಭೂತಿ ಬಳಸಲ್ವಾ. ಇದೇನಿದು ಇವರು ದಿನಕ್ಕೊಂದು ರೀತಿ ಆಡ್ತಾರೆ. ನಾವೇನೂ ಅಭಿವೃದ್ಧಿ ಮಾಡಿದ್ದೇವೆ, ಅವರೇನೂ ಅಭಿವೃದ್ಧಿ ಮಾಡಿದ್ದಾರೆ ಎಂಬ ವಿಚಾರ ಇಟ್ಟುಕೊಂಡು ಚುನಾವಣೆಗೆ ಹೋಗಲಿ. ಅದನ್ನು ಬಿಟ್ಟು ಈ ರೀತಿ ಮಾಡುವುದು ಸರಿಯಲ್ಲ. ಶಾಸಕ ಎನ್ನುವುದು ಉದ್ಯೋಗ ಅಲ್ಲ, ಜನರ ಸೇವೆಗೆ ಸಿಗುವ ಅವಕಾಶ. ಎಲ್ಲವನ್ನೂ ಜನರು ತೀರ್ಮಾನ ಮಾಡುತ್ತಾರೆ ಎಂದು ಕಾಂಗ್ರೆಸ್ ಪ್ರಣಾಳಿಕೆಗೆ ಅಸಮಾಧಾನ ಹೊರಹಾಕಿದರು.
ಬಿರುಸಿನ ಪ್ರಚಾರದಲ್ಲಿ ತೊಡಗಿರುವ ಸೋಮಣ್ಣ
ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಈ ಹಿನ್ನೆಲೆಯಲ್ಲಿ ಕೊನೆ ಹಂತದ ಪ್ರಚಾರದಲ್ಲಿ ತೊಡಗಿರುವ ಸೋಮಣ್ಣ, ಕಳೆದ ಎರಡು ದಿನಗಳಿಂದ ಜಿಲ್ಲಾ ಕೇಂದ್ರಗಳಲ್ಲಿ ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ. ಅಲ್ಲದೇ ವಿವಿಧ ಬಡಾವಣೆಗಳಿಗೆ ಭೇಟಿ ನೀಡಿರುವ ಸೋಮಣ್ಣ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಬಿಜೆಪಿಯನ್ನು ಗೆಲ್ಲಿಸಲು ಶತಪ್ರಯತ್ನ ನಡೆಸುತ್ತಿದ್ದಾರೆ. ಈಗಾಗಲೇ ಚಾಮರಾಜನಗರದ ಎಲ್ಲಾ ಊರುಗಳಿಗೆ, ಜಿಪಂ, ತಾಪಂ ಕೇಂದ್ರಗಳಿಗೆ ಒಂದು ಬಾರಿ ಭೇಟಿ ಕೊಟ್ಟು ಸೋಮಣ್ಣ ಮತಬೇಟೆ ನಡೆಸಿದ್ದಾರೆ.
ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಭೇಟಿ
ಚುನಾವಣೆ ಘೋಷಣೆಯಾದ ಮೇಲೆ ಇದುವರೆಗೂ ಜೆಡಿಎಸ್ ನಾಯಕ ಹೆಚ್.ಡಿ ಕುಮಾರಸ್ವಾಮಿ ಹಾಗೂ ಕೈ ನಾಯಕ ಸಿದ್ದರಾಮಯ್ಯ ಚಾಮರಾಜನಗರಕ್ಕೆ ಭೇಟಿ ನೀಡಿಲ್ಲ. ಬಹಿರಂಗ ಪ್ರಚಾರದ ಕೊನೆ ದಿನಗಳಲ್ಲಿ ಇಬ್ಬರೂ ನಾಯಕರು ಭೇಟಿ ನೀಡಲಿದ್ದಾರೆ ಎಂದು ತಿಳಿದು ಬಂದಿದೆ. ಜೊತೆಗೆ, ನಟ ಸುದೀಪ್ ಮತ್ತು ದರ್ಶನ್ ಕೂಡ ವಿವಿಧ ಅಭ್ಯರ್ಥಿಗಳ ಪರ ಪ್ರಚಾರ ನಡೆಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.ನಿನ್ನೆ ತಾನೇ ವರುಣ ವಿಧಾನಸಭಾ ಕ್ಷೇತ್ರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಬಿ ಎಸ್.ಯಡಿಯೂರಪ್ಪ, ಬಿಜೆಪಿ ಅಭ್ಯರ್ಥಿ ಸೋಮಣ್ಣ ಪರ ಪ್ರಚಾರ ಸಭೆ ನಡೆಸಿ ಮತಯಾಚನೆ ಮಾಡಿದ್ದರು. ಈ ಸಂದರ್ಭದಲ್ಲಿ ಕೇಂದ್ರ ಸಚಿವ ಅಮಿತ್ ಶಾ ಜೊತೆ ಯಡಿಯೂರಪ್ಪ ಅವರು ಆಗಮಿಸಿದ್ದರು.