ದೇಶವನ್ನು ಇನ್ನೆಷ್ಟು ಭಾಗ ಮಾಡಲು ಹೊರಟಿದ್ದೀರಿ?: ಡಿಕೆ ಸುರೇಶ್ ಪ್ರತ್ಯೇಕ ರಾಷ್ಟ್ರ ಹೇಳಿಕೆಗೆ ಪ್ರಧಾನಿ ಮೋದಿ ತಿರುಗೇಟು!

ಹೊಸದಿಗಂತ ಡಿಜಿಟಲ್ ಡೆಸ್ಕ್:
 
ನೀವು ದೇಶವನ್ನು ಈಗಾಗಲೇ ವಿಭಜನೆ ಮಾಡಿದ್ದೀರಿ. ವಿಭಜನೆ ಮಾಡುತ್ತಲೇ ಆಡಳಿತ ನಡೆಸಿದ್ದೀರಿ. ದೇಶವನ್ನು ಇನ್ನೆಷ್ಟು ಭಾಗ ಮಾಡಲು ಹೊರಟಿದ್ದೀರಿ. ಒಬ್ಬ ಕಾಂಗ್ರೆಸ್ ಸಂಸದ ಪ್ರತ್ಯೇಕ ರಾಷ್ಟ್ರದ ಹೇಳಿಕೆ ನೀಡುತ್ತಿದ್ದಾರೆ. ದೇಶವನ್ನು ಒಡೆದ ಮೇಲೂ ನಿಮಗೆ ತೃಪ್ತಿ ಇಲ್ಲವೇ ಎಂದು ಪ್ರದಾನಿ ನರೇಂದ್ರ ಮೋದಿ ಪ್ರಶ್ನಿಸಿದ್ದಾರೆ. ಈ ಮೂಲಕ ಸಂಸದ ಡಿಕೆ ಸುರೇಶ್ ಪ್ರತ್ಯೇಕ ರಾಷ್ಟ್ರ ಕೂಗು ಹೇಳಿಕೆಯನ್ನು ಉಲ್ಲೇಖಿಸಿ ಮೋದಿ ತಿರುಗೇಟು ನೀಡಿದ್ದಾರೆ.

ಲೋಕಸಭೆಯಲ್ಲಿ ಬಜೆಟ್ ಅಧಿವೇಶನದಲ್ಲಿ ರಾಷ್ಟ್ರಪತಿ ಭಾಷಣದ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಮೋದಿ, ಕಾಂಗ್ರೆಸ್ ಹಾಗೂ ವಿಪಕ್ಷಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಭಯೋತ್ಪಾದನೆ, ನಕ್ಸಲ್ ಆತಂಕ ಸೇರಿದಂತೆ ಯಾವುದೇ ದಾಳಿಯನ್ನು ಸಹಿಸುವುದಿಲ್ಲ. ಭಾರತೀಯ ಸೇನೆ ಗಡಿಯಲ್ಲಿ ಸಶಕ್ತವಾಗಿ ಹೋರಾಡುತ್ತಿದೆ. ನಮ್ಮ ಸೇನೆಯ ಬಗ್ಗೆ ನಮಗೆ ಹೆಮ್ಮೆಯಾಗಬೇಕು. ರಾಜಕೀಯ ನಾಯಕರ ಚುಚ್ಚು ಮಾತಿನಿಂದ ಸೇನೆ ಆತ್ಮವಿಶ್ವಾಸ ಕುಗ್ಗಲಿದೆ ಅನ್ನೋ ಭಾವನೆ ಇದ್ದರೆ ನಿಮ್ಮ ಅಲೋಜನೆ ಬದಲಿಸಿ ಎಂದು ಮೋದಿ ಹೇಳಿದ್ದಾರೆ..

ನಮ್ಮ ಸರ್ಕಾರ ಕರ್ಪೂರಿ ಠಾಕೂರ್‌ಗೆ ಭಾರತ ರತ್ನವನ್ನು ಘೋಷಣೆ ಮಾಡಿದೆ. ಸರ್ಕಾರದಲ್ಲಿ ಒಬಿಸಿ ಎಷ್ಟಿದ್ದಾರೆ ಎಂದು ವಿಪಕ್ಷ ನಾಯಕರು ಕೇಳುತ್ತಿದ್ದಾರೆ. ಅವರಿಗೆ ಅತೀ ದೊಡ್ಡ ಒಬಿಸಿ ನಾಯಕ ಎದುರುಗಡೆ ಇರುವುದು ಕಾಣುತ್ತಿಲ್ಲ ಎಂದು ಮೋದಿ ಹೇಳಿದ್ದಾರೆ.

ಯುಪಿಎ ಅವಧಿಯಲ್ಲಿ ಹೆಚ್ಚುವರಿ ಸಂವಿಧಾನೇತರ ಸಮಿತಿ ರಚಿಸಲಾಗಿತ್ತು. ಈ ಸಮಿತಿಯಲ್ಲಿ ಒಂದೇ ಒಂದು ಒಬಿಸಿ ಪ್ರತಿನಿಧಿಸುವವರು ಇರಲಿಲ್ಲ ಎಂದು ಮೋದಿ ರಾಹುಲ್ ಗಾಂಧಿಗೆ ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ ಒಬಿಸಿ ನಾಯಕರಿಗೆ ಅಪಮಾನ ಮಾಡಿದೆ. ಅವಕಾಶವನ್ನೂ ಕಲ್ಪಿಸಲಿಲ್ಲ, ಬೆಳೆಯಲೂ ಬಿಡಲಿಲ್ಲ ಎಂದು ಮೋದಿ ಹೇಳಿದ್ದಾರೆ
.
ಮುಂದಿನ ದಿನಗಲ್ಲಿ 3 ಲಕ್ಷ ಲಕ್ ಪತಿ ದೀದಿ ನೋಡಲು ಸಿಗಲಿದೆ. ಲಕ್ ಪತಿ ದೀದಿ ಯೋಜನೆ ಮೂಲಕ ನಾರಿ ಶಕ್ತಿಯನ್ನ ಸಶಕ್ತಿಕರಣಗೊಳಿಸುವ ಕೆಲಸ ನಡೆಯುತ್ತಿದೆ. ಇಂದು ಹೆಣ್ಣು ಮಗು ಹುಟ್ಟಿದರೆ, ಸುಖನ್ಯ ಸಮೃದ್ಧಿ ಖಾತೆ ತೆರೆದಿದ್ದೀರಾ ಅನ್ನೋ ಮಾತು ಕೇಳಿಬರುತ್ತದೆ. ಇಂದು ಗರ್ಭಿಣಿಯರಿಗೆ ಪಾವತಿ ರಜೆ ಸೇರಿದಂತೆ ಹಲವು ಬದಲಾವಣೆ ತರಲಾಗಿದೆ. ಇಂದು ಮೇಡಂ ನಿಮ್ಮ ಸ್ಟಾರ್ಟ್‌ಅಪ್‌ನಲ್ಲಿ ನನಗೆ ಉದ್ಯೋಗವಿದೆಯಾ ಅನ್ನೋ ಮಾತು ಕೇಳಿಬರುತ್ತಿದೆ. ಮಗಳ ವಯಸ್ಸಾಗುತ್ತಿದೆ, ಮದುವೆ ಯಾವಾಗ ಅನ್ನೋ ಪ್ರಶ್ನೆ ಕೇಳಲಾಗುತ್ತಿತ್ತು. ಆದರೆ ಈಗ, ನಿಮ್ಮ ಕೆಲಸ, ವೈಯುಕ್ತಿ ಕೆಲಸ, ಮನೆಯನ್ನು ಹೇಗೆ ಸಂಭಾಳಿಸುತ್ತೀರಿ ಎಂದು ಕೇಳಲಾಗುತ್ತದೆ. ಇದು ಬದಲಾವಣೆ. ಅಮೃತಕಾಲದಲ್ಲಿ ಈ ಬದಲಾವಣೆ ಆಗಿದೆ ಎಂದು ಮೋದಿ ಹೇಳಿದ್ದಾರೆ.

ಕಾಂಗ್ರೆಸ್ 10 ವರ್ಷದ ಆಡಳಿತದಲ್ಲಿ 25 ಸಾವಿರ ಕೋಟಿ ಅನುದಾನ ರೈತರಿಗೆ ನೀಡಿದ್ದರು. ನಮ್ಮ ಅವಧಿಯಲ್ಲಿ 1.25 ಲಕ್ಷ ಕೋಟಿ ರೂಪಾಯಿ ನೀಡಲಾಗಿದೆ. 2019ರ ಚುನಾವಣೆ ಬಳಿಕ ಮೋದಿ ಕೃಷಿ ಸಮ್ಮಾನ್ ಯೋಜನೆ ನಿಲ್ಲಿಸುತ್ತಾರೆ ಎಂದು ಸುಳ್ಳುಗಳನ್ನು ರೈತರ ತಲೆಯಲ್ಲಿ ತುಂಬಲಾಗಿತ್ತು. ಇದೇ ಮೊದಲ ಬಾರಿಗೆ ಮತ್ಸ ಸಂಪದ ಜಾರಿಗೆ ತರಲಾಗಿದೆ ಎಂದು ಮೋದಿ ಹೇಳಿದ್ದಾರೆ.

10 ವರ್ಷದಲ್ಲಿ ವಿಮಾನ ನಿಲ್ದಾಣಗಳ ಸಂಖ್ಯೆ ದುಪ್ಪಟ್ಟಾಗಿದೆ. ಇದೀಗ ಭಾರತ ವಿಶ್ವದಲ್ಲಿ 3ನೇ ಅತೀ ದೊಡ್ಡ ದೇಶಿಯ ವಿಮಾನ ನಿಲ್ದಾಣ ಹೊಂದಿದೆ ರಾಷ್ಟ್ರವಾಗಿದೆ. ಭಾರತ ಅತೀ ದೊಡ್ಡ ಡಿಜಿಟಲ್ ಆರ್ಥಿಕತೆ ದೇಶವಾಗಿದೆ. 2014ಕ್ಕಿಂತ ಮೊದಲು ದೇಶದ ಡಿಜಿಟಲ್ ಆರ್ಥಿಕತೆ ಶೂನ್ಯವಾಗಿತ್ತು. 2014ಕ್ಕಿಂತ ಮೊದಲು ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಬೆಲೆ ಏರಿಕೆ ಕುರಿತು 2 ಜನಪ್ರಿಯ ಗೀತೆಗಳು ಪ್ರಚಲಿತದಲ್ಲಿತ್ತು. ಈ ಎರಡು ಗೀತೆಗಳು ಕಾಂಗ್ರೆಸ್ ಸಮಯದಲ್ಲಿ ಆಗಿತ್ತು. 10 ವರ್ಷದ ಹಿಂದೆ ಈ ಸದನದಲ್ಲಿ ಭ್ರಷ್ಟಾಚಾರ, ಹಗರಣದ ಚರ್ಚೆ ನಡೆಯುತ್ತಿತ್ತು. ಕ್ರಮ ಕೈಗೊಳ್ಳಲು ಆಗ್ರಹ, ಪ್ರತಿಭಟನೆಗಳೇ ಕೇಳುತ್ತಿತ್ತು. ಇಂದು ಭ್ರಷ್ಟಾಚಾರ ವಿರುದ್ಧ ಕ್ರಮ ಆಗುತ್ತಿದೆ. ಯುಪಿಎ ಸಮಯದಲ್ಲಿ ಎಜೆನ್ಸಿಗಳು ತಮ್ಮ ರಾಜಕೀಯ ಲಾಭಕ್ಕೆ ಬಳಸಿಕೊಂಡಿತ್ತು. ನಮ್ಮ ಸರ್ಕಾರದ ಅವಧಿಯಲ್ಲಿ 1 ಲಕ್ಷ ಕೋಟಿ ರೂಪಾಯಿ ಅಕ್ರಮ ಸಂಪತ್ ಪತ್ತೆ ಹಚ್ಚಲಾಗಿದೆ. 10 ರಿಂದ 15 ಲಕ್ಷ ಕೋಟಿ ರೂಪಾಯಿ ಹಗರಣಗಳಲ್ಲೇ ಕಾಂಗ್ರೆಸ್ ಮುಳುಗಿತ್ತು ಎಂದು ಮೋದಿ ಹೇಳಿದ್ದಾರೆ.

ಕಾಂಗ್ರೆಸ್ ಸಮಯದಲ್ಲಿನ ಒಂದು ಉದಾರಣೆ ಹೇಳುತ್ತೇನೆ. ಹೆಣ್ಣು ಮಗುವಿನ ಜನ್ಮವೇ ಆಗಿರಲಿಲ್ಲ. ಆದರೆ ಕಾಂಗ್ರೆಸ್ ಸರ್ಕಾರ ಹೆಣ್ಣು ಮಗುವಿನ ಹೆಸರಿನಲ್ಲಿ ವಿಧವೆ ಪಿಂಚಣಿ ನೀಡುತ್ತಿತ್ತು. ಇಂತಹ ನಕಲಿಗಳನ್ನು ಪತ್ತೆ ಹಚ್ಚಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲಾಗಿದೆ. ಕಾಂಗ್ರಸ್ ವಾಶಿಂಗ್ ಮಶೀನ್ ಚಿತ್ರಗಳನ್ನು ಮುಂದಿಟ್ಟು ಭ್ರಷ್ಟಾಚಾರದ ಕುರಿತು ಮಾತನಾಡುತ್ತಿದೆ. ಆದರೆ ಕೋರ್ಟ್‌ನಿಂದ ಶಿಕ್ಷೆ ಎದುರಿಸಿದ ಭ್ರಷ್ಟಾಚಾರಿಗಳನ್ನು ಕಾಂಗ್ರೆಸ್ ಸಮರ್ಥಿಸಿಕೊಳ್ಳುತ್ತಿದೆ. ನೀವು ಈ ದೇಶಕ್ಕೆ ಯಾವ ಪ್ರೇರಣೆ ನೀಡುತ್ತೀರಿ ಎಂದು ಮೋದಿ ಪ್ರಶ್ನಿಸಿದ್ದಾರೆ.

ಪ್ರತಿಪಕ್ಷಗಳ ಸಂಕಲ್ಪವನ್ನು ನಾನು ಶ್ಲಾಘಿಸುತ್ತೇನೆ. ಹಲವು ದಶಕಗಳಿಂದ ನೀವು ಇಲ್ಲಿ (ಸರ್ಕಾರದಲ್ಲಿ) ಕುಳಿತುಕೊಂಡಿರುವ ರೀತಿ, ಅಲ್ಲಿಯೇ (ಪ್ರತಿಪಕ್ಷದಲ್ಲಿ) ಕುಳಿತುಕೊಳ್ಳಲು ನೀವು ನಿರ್ಧರಿಸಿರುವ ರೀತಿ. ಸಾರ್ವಜನಿಕರು ಖಂಡಿತವಾಗಿಯೂ ನೀಡುತ್ತಾರೆ. ಅವರ ಆಶೀರ್ವಾದ ನಿಮ್ಮ ಮೇಲಿರಲಿ ಎಂದು ವ್ಯಂಗ್ಯವಾಡಿದ್ದಾರೆ.

ನಿಮ್ಮಲ್ಲಿ ಅನೇಕರು (ಪ್ರತಿಪಕ್ಷಗಳು) ಚುನಾವಣೆಯಲ್ಲಿ ಸ್ಪರ್ಧಿಸುವ ಧೈರ್ಯವನ್ನು ಕಳೆದುಕೊಂಡಿರುವುದನ್ನು ನಾನು ನೋಡಿದ್ದೇನೆ. ಕಳೆದ ಬಾರಿಯೂ ಕೆಲವು ಸೀಟುಗಳು ಬದಲಾಗಿದ್ದವು. ಈ ಬಾರಿಯೂ ಸೀಟು ಬದಲಾಯಿಸಲು ಹಲವರು ಮುಂದಾಗಿದ್ದಾರೆ ಎಂಬ ಮಾತು ಕೇಳಿ ಬಂದಿದೆ. ಈಗ ಅನೇಕರು ಲೋಕಸಭೆಯ ಬದಲು ರಾಜ್ಯಸಭೆಗೆ ಹೋಗಲು ಬಯಸುತ್ತಾರೆ ಎಂದು ನಾನು ಕೇಳಿದ್ದೇನೆ. ಪರಿಸ್ಥಿತಿಯನ್ನು ನಿರ್ಣಯಿಸುವ ಮೂಲಕ ಅವರು ತಮ್ಮ ಮಾರ್ಗಗಳನ್ನು ಹುಡುಕುತ್ತಿದ್ದಾರೆ ಎಂದು ವಿಪಕ್ಷಗಳಿಗೆ ಟಾಂಗ್‌ ಕೊಟ್ಟಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!