ಹೊಸದಿಗಂತ ಡಿಜಿಟಲ್ ಡೆಸ್ಕ್:
ಶ್ರೀಕೃಷ್ಣನಿಗೆ ಬೆಣ್ಣೆ ಎಂದರೆ ಬಹಳ ಇಷ್ಟ ಹಾಗಾಗಿಯೇ ಕದ್ದು ಕದ್ದು ತಿನ್ನುವುದನ್ನು ಕಿಲಿತಿದ್ದ ನವನೀತ ಚೋರನ ಜನ್ಮಾಷ್ಠಮಿ ಇಂದು. ಭಾರತದಾದ್ಯಂತ ಶ್ರೀಕೃಷ್ಣನ ಅನೇಕ ದೇವಾಲಯಗಳಿವೆ. ಅವುಗಳಲ್ಲಿ ಇದೂ ಒಂದು. ಕನ್ನಯ್ಯನಿಗೆ ಹಸಿವು ತುಂಬಾ ಹೆಚ್ಚಾಗಿರುತ್ತದಂತೆ, ಹಸಿವು ತಡೆದುಕೊಳ್ಳುವುದಿಲ್ಲ ಎಂಬ ಕಾರಣಕ್ಕೆ ಇಲ್ಲಿ ದಿನಕ್ಕೆ 10 ಬಾರಿ ನೈವೇದ್ಯವನ್ನು ಇಡಲಾಗುತ್ತದೆ. ದೇವರ ನಾಡು ಎಂದೇ ಕರೆಯಲ್ಪಡುವ ಕೇರಳದಲ್ಲಿರುವ ಈ ಶ್ರೀಕೃಷ್ಣನ ಈ ದೇವಾಲಯದಲ್ಲಿ ಈ ಪದ್ದತಿ ಇದೆ.
ಇಂದು (ಆಗಸ್ಟ್ 18,2022) ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಂದರ್ಭದಲ್ಲಿ ಈ ದೇವಾಲಯದ ಬಗ್ಗೆ ತಿಳಿದುಕೊಳ್ಳೋಣ. ಈ ಶ್ರೀ ಕೃಷ್ಣನ ದೇವಾಲಯವು ಕೇರಳದ ಕೊಟ್ಟಾಯಂ ಜಿಲ್ಲೆಯ ತಿರುವೆರಪು ಅಥವಾ ತಿರುವರಪ್ಪು ಪ್ರದೇಶದಲ್ಲಿದೆ. ಆ ದೇವಾಲಯದಲ್ಲಿ ಪ್ರತಿಷ್ಠಾಪಿಸಲ್ಪಟ್ಟ ಕೃಷ್ಣನ ವಿಗ್ರಹವು ಹಸಿವನ್ನು ಸಹಿಸಲಾರದು. ಈ ದೇವಾಲಯಕ್ಕೆ 1500 ವರ್ಷಗಳ ಇತಿಹಾಸವಿದೆ. ನೈವೇದ್ಯವಾಗಿ ತಟ್ಟೆಯಲ್ಲಿ ಇಟ್ಟ ಪ್ರಸಾದ ಕ್ರಮೇಣ ಕಡಿಮೆಯಾಗುತ್ತದೆ ಅಂತಾರೆ ಭಕ್ತರು.
ಕೃಷ್ಣನು ತನ್ನ ಚಿಕ್ಕಪ್ಪನಾದ ಕಂಸನನ್ನು ಕೊಂದ ನಂತರ ಬಾಲ ಕೃಷ್ಣನಿಗೆ ತುಂಬಾ ಹಸಿವಾಗಿತ್ತು ಎಂದು ಹಿಂದೂಗಳು ನಂಬುತ್ತಾರೆ.ಅಂತೆಯೇ ಈ ದೇವಾಲಯದಲ್ಲಿರುವ ಭಗವಂತನ ವಿಗ್ರಹವೂ ಕೂಡ ಹಸಿವಿನಿಂದ ನರಳುತ್ತದೆ ಎಂಬ ನಂಬಿಕೆಯಿದೆ. ನೈವೇದ್ಯ ಮಾಡಲು ಸ್ವಲ್ಪ ತಡವಾದರೂ ಮೂರ್ತಿ ತಾನಾಗಿಯೇ ಸಣ್ಣದಾಗಿ ಕುಗ್ಗುತ್ತೆ ಅಂತಾರೆ ಸ್ಥಳೀಯರು.
ಈ ದೇವಾಲಯವನ್ನು ದಿನಕ್ಕೆ ಎರಡು ನಿಮಿಷ ಮಾತ್ರ ಮುಚ್ಚಲಾಗುತ್ತದೆ. ಏಕೆಂದರೆ ಶ್ರೀಕೃಷ್ಣ ಕೇವಲ ಎರಡು ನಿಮಿಷ ಮಾತ್ರ ನಿದ್ರಿಸುತ್ತಾನಂತೆ. ಸಾಮಾನ್ಯವಾಗಿ ಹೆಚ್ಚಿನ ಜನಪ್ರಿಯ ದೇವಾಲಯಗಳನ್ನು ಚಂದ್ರಗ್ರಹಣ ಮತ್ತು ಸೂರ್ಯಗ್ರಹಣದ ಸಮಯದಲ್ಲಿ ಮುಚ್ಚಲಾಗುತ್ತದೆ. ಆದರೆ ಗ್ರಹಣ ಬಂದರೂ ಈ ಕೃಷ್ಣನ ದೇವಾಲಯ ಮುಚ್ಚುವುದಿಲ್ಲ. ಗ್ರಹಣದ ಸಮಯದಲ್ಲಿ ಶ್ರೀಕೃಷ್ಣನ ವಿಗ್ರಹಕ್ಕೆ ನೈವೇದ್ಯ ಸಹ ಅರ್ಪಿಸಲಾಗುತ್ತದೆ. ಈ ದೇವಾಲಯದಲ್ಲಿ ಸ್ವಾಮಿಯ ಪ್ರಸಾದವನ್ನು ಸೇವಿಸುವವರಿಗೆ ಜೀವನದಲ್ಲಿ ಎಂದಿಗೂ ಹಸಿವು ಉಂಟಾಗುವುದಿಲ್ಲ ಎಂದು ನಂಬಲಾಗಿದೆ. ಸಮಯವಿದ್ದರೆ, ಅಥವಾ ಕೇರಳಕ್ಕೆ ಭೇಟಿ ಕೊಟ್ಟರೆ ನೀವೂ ಒಮ್ಮೆ ದರ್ಶನ ಪಡೆಯಿರಿ.