ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೈಕ್ರೋ ಫೈನಾನ್ಸ್ ಕಾಟಕ್ಕೆ ಮಾನ್ವಿ ತಾಲ್ಲೂಕಿನ ಕಪಗಲ್ ಗ್ರಾಮದ ಶರಣಬಸವ ಎನ್ನುವ ವ್ಯಕ್ತಿ ಜೀವ ತೆಗೆದುಕೊಂಡಿದ್ದ. ಪತಿಯ ಸಾವಿಗೆ ಕಾರಣವಾದ ಕಂಪನಿಯ ಸಿಬ್ಬಂದಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಮೃತನ ಪತ್ನಿ ಪಾರ್ವತಿ ಒತ್ತಾಯಿಸಿದ್ದಾಳೆ. ಗೃಹ ಸಚಿವ ಪರಮೇಶ್ವರ್ಗೆ ಮಾಂಗಲ್ಯ ಸರವನ್ನು ಪೋಸ್ಟ್ ಮಾಡಿ ಸುದ್ದಿಯಾಗಿದ್ದರು. ಸಚಿವರಿಗೆ ಯಾಕೆ ತಾಳಿ ಕಳಿಸಿದೆ ಎನ್ನುವ ಬಗ್ಗೆ ಪತ್ನಿ ಕಾರಣ ನೀಡಿದ್ದಾರೆ.
ಮೃತ ವ್ಯಕ್ತಿಯ ಪತ್ನಿ ಪಾರ್ವತಿ ಗಂಡನೇ ಇಲ್ಲ ಅಂದ್ರೆ ಮಾಂಗಲ್ಯ ಸರ ಯಾಕೆ ಬೇಕ್ರಿ? ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಪತಿ ತೀರಿಹೋಗಿದ್ದಾರೆ. ಆವಂತಿ ಫೈನಾನ್ಸ್, ಎಲ್ ಅಂಡ್ ಫೈನಾನ್ಸ್ನಿಂದ 40 ಸಾವಿರ ಸಾಲ ಪಡೆದಿದ್ದರು. ಒಂದೇ ಒಂದು ಕಂತು ಬಾಕಿ ಇರದಂತೆ ಪ್ರತಿ ತಿಂಗಳು ಹಣ ಕಟ್ಟುತ್ತಿದ್ದೆವು. ನಂತರದ ತಿಂಗಳಲ್ಲಿ ಹಣ ಹಿಂತಿರುಗಿಸಲು ಕಷ್ಟವಾಗಿತ್ತು. ಒಂದೆರೆಡು ದಿನ ಟೈಂ ಕೊಡಿ ಅಂದ್ರೂ ಅವರು ಕೊಟ್ಟಿರಲಿಲ್ಲ. ಸಿಬ್ಬಂದಿ ಬಾಯಿಗೆ ಬಂದಂತೆ ಬೈದರು ಎಂದಿದ್ದಾರೆ.
ಹಣ ಕಟ್ಟೋಕೆ ಆಗಿಲ್ಲ ಅಂದ್ರೆ ಮುಖದ ಮೇಲೆ ಮೀಸೆ ಯಾಕೆ ಬಿಟ್ಟಿದ್ದೀಯಾ ಎಂದು ಹೀಯಾಳಿಸಿದ್ದರು. ಇದರಿಂದ ಮನನೊಂದು ನನ್ನ ಪತಿ ದುಡುಕಿನ ನಿರ್ಧಾರ ತೆಗೆದುಕೊಂಡರು. ಅವರ ನಿಧನದಿಂದ ದಿಕ್ಕು ತೋಚದಂತಹ ಪರಿಸ್ಥಿತಿ ನಿರ್ಮಾಣ ಆಗಿದೆ. ಮೂವರು ಮಕ್ಕಳನ್ನ ಸಾಕೋದು ಹೇಗೆ ಎಂಬ ಆತಂಕ ಇದೆ. ಅದಕ್ಕೆ ಮೈಕ್ರೋಫೈನಾನ್ಸ್ ನನ್ನ ಮಾಂಗಲ್ಯ ಕಿತ್ತುಕೊಂಡಿದ್ದಕ್ಕೆ ಸಚಿವರಿಗೆ ಮಾಂಗಲ್ಯ ಕಳಿಸಿದ್ದೇನೆ. ನನ್ನ ಮೂವರು ಮಕ್ಕಳಿಗೆ ನ್ಯಾಯ ಬೇಕು ಎಂದು ಪಾರ್ವತಿ ಕಣ್ಣೀರಿಟ್ಟಿದ್ದಾರೆ.