ಹೊಸದಿಗಂತ ಡಿಜಿಟಲ್ ಡೆಸ್ಕ್ :
ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಮೇಶ್ ಜಾರಕಿಹೊಳಿ ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ ಆರೋಪಗಳ ಸುರಿಮಳೆಗೈದಿದ್ದಾರೆ.
ನಾನು ರಾಜಕೀಯವಾಗಿ ಅವರಿಗಿಂತ ಬೆಳೆಯುತ್ತೇನೆ ಎಂಬ ಕಾರಣಕ್ಕೆ ನನ್ನನ್ನು ಟಾರ್ಗೆಟ್ ಮಾಡಿ ಸಿಡಿ ಷಡ್ಯಂತ್ರ ನಡೆಸಿದರು ಎಂದು ಆರೋಪಿಸಿದ್ದಾರೆ.
ರಾಜಕಾರಣ ಮಾಡಲು ಡಿ.ಕೆ.ಶಿವಕುಮಾರ್ ನಾಲಾಯಕ್. ಡಿಕೆಶಿ ಹಾಗೂ ವಿಷಕನ್ಯೆಯಿಂದ ಕಾಂಗ್ರೆಸ್ ನಾಶವಾಗುತ್ತದೆ. ನನ್ನ ವಿರುದ್ಧ ಷಡ್ಯಂತ್ರ ಮಾಡಿ ವೈಯಕ್ತಿಕ ಜೀವನ ಹಾಳು ಮಾಡಿದರು. ಓರ್ವ ಯುವತಿಯಿಂದ ನನ್ನ ತೇಜೋವಧೆ ಮಾಡಿಸಿದರು. ನನ್ನನ್ನು ಮುಗಿಸಲು ಸಿಡಿ ಷಡ್ಯಂತ್ರಕ್ಕೆ 40 ಕೋಟಿ ಖರ್ಚಾಗಿದೆ ಎಂದು ಹೇಳಿದ್ದಾರೆ. ಈಬಗ್ಗೆ ಡಿಕೆಶಿ ಆಡಿಯೋ ಇದೆ. ನನ್ನ ಬಳಿಯೂ ಅವರ 20 ಸಿಡಿಗಳಿವೆ, ಡಿಕೆಶಿವಕುಮಾರ್ ವಿರುದ್ಧ 128 ಸಾಕ್ಷ್ಯಗಳಿವೆ, ಸಾಕಷ್ಟು ದಾಖಲೆಗಳು ಇವೆ ಎಲ್ಲವನ್ನೂ ಸಿಬಿಐ ಅಧಿಕಾರಿಗಳಿಗೆ ವಹಿಸುತ್ತೇನೆ. ಸಿಡಿ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿದರು.
ಇನ್ನು ರಮೇಶ್ ಜಾರಕಿಹೊಳಿ ಮಾತು ಮುಂದುವರೆಸಿ, ಷಡ್ಯಂತ್ರಮಾಡಿ 120ಕ್ಕೂ ಹೆಚ್ಚು ಜನರ ಸಿಡಿ ಮಾಡಿದ್ದಾರೆ. 2000ನೇ ಇಸವಿಯಿಂದ ರಾಜ್ಯದಲ್ಲಿ ಸಿಡಿ ರಾಜಕಾರಣ ನಡೆಯುತ್ತಿದೆ. ನನ್ನ ಬಳಿ 20 ಸಿಡಿಗಳಿವೆ, ಎಲ್ಲವನ್ನೂ ಸಿಬಿಐಗೆ ನೀಡುತ್ತೇನೆ. ಕಾಂಗ್ರೆಸ್ ನಾಯಕರು ಸೇರಿದಂತೆ ಹಲವರ ಸಿಡಿ ಮಾಡಿದ್ದಾರೆ. ಸಿಡಿ ತೋರಿಸಿಯೇ ಎಲ್ಲ ನಾಯಕರ ಬಾಯಿ ಮುಚ್ಚಿಸುತ್ತಿದ್ದಾರೆ. ಅವರ ವಿರುದ್ಧ ಮಾತಾಡಿದರೆ ಸಿಡಿ ಬಿಡುಗಡೆ ಧಮ್ಕಿ ಹಾಕುತ್ತಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ & ಕಂಪನಿ ಬಂಧನವಾಗಬೇಕು. ಯುವತಿ, ಶ್ರವಣ್ ಕುಮಾರ್ ಸೇರಿದಂತೆ ಎಲ್ಲರನ್ನೂ ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.ಕಾಂಗ್ರೆಸ್ ಪಕ್ಷದ ಮಹಿಳಾ ಪದಾಧಿಕಾರಿ ಮನೆಯಲ್ಲಿ ‘ಸಿಡಿ ಯುವತಿ’ ಇದ್ದಾರೆ. ಆಕೆಯನ್ನು ಬಂಧಿಸಿದರೆ ಎಲ್ಲಾ ಷಡ್ಯಂತ್ರ ಬಯಲಾಗುತ್ತದೆ ಎಂದು ಶಾಸಕ ರಮೇಶ್ ಜಾರಕಿಹೊಳಿ ಹೇಳಿದರು.
ರಾಜಕಾರಣದಲ್ಲಿ ಯಾರೇ ಆದರೂ ವೈಯಕ್ತಿಕ ದಾಳಿ ಮಾಡಬಾರದು: ಯಾರಾದರೂ ದಾರಿ ತಪ್ಪಿದರೆ ಸರಿದಾರಿಗೆ ತರಲು ಪ್ರಯತ್ನಿಸಬೇಕು. ಯಾರನ್ನೇ ಆದರೂ ಟಾರ್ಗೆಟ್ ಮಾಡಿ ಮುಗಿಸಲು ಯತ್ನಿಸಬಾರದು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರಾಜಕೀಯದಲ್ಲಿರಲು ನಾಲಾಯಕ್ ಎಂದು ಡಿ.ಕೆ.ಶಿವಕುಮಾರ್ ವಿರುದ್ಧ ರಮೇಶ್ ಜಾರಕಿಹೊಳಿ ನೇರವಾಗಿ ವಾಗ್ದಾಳಿ ನಡೆಸಿದ್ದಾರೆ.