ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಜೆಪಿ ಪಕ್ಷದಲ್ಲಿ ಏನು ನಡೆಯುತ್ತಿದೆ ಎಂಬುದು ನನಗೆ ತಿಳಿದಿಲ್ಲ. ಪಕ್ಷದಿಂದ ಉಚ್ಛಾಟನೆಯಾದ ಬಳಿಕ ನಾನು ಯಾರ ಸಂಪರ್ಕದಲ್ಲೂ ಇಲ್ಲ, ಹಳ್ಳಿಗಳಲ್ಲಿ ಓಡಾಡುತ್ತಿದ್ದು, ಜನರಿಂದ ಉತ್ತಮ ಬೆಂಬಲ ದೊರಕುತ್ತಿದೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ವಿಜಯಪುರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಮೂರು ರಾಜಕೀಯ ಪಕ್ಷಗಳ ಮೇಲೆ ಜನರು ವಿಶ್ವಾಸ ಕಳೆದುಕೊಂಡಿದ್ದಾರೆ. ವಿಜಯದಶಮಿಯವರೆಗೂ ರಾಜ್ಯ ಸುತ್ತುತ್ತೇನೆ. ನಾಳೆ ಹಾವೇರಿಯಲ್ಲಿ ಈಶ್ವರಪ್ಪ ಹಾಗೂ ನಾನು ಸಮಾವೇಶ ಮಾಡುತ್ತಿದ್ದೇವೆ. ಹಿಂದು ಯುವತಿಯರ ಮೇಲೆ ದೌರ್ಜನ್ಯವಾಗುತ್ತಿದೆ, ಅತ್ಯಾಚಾರ, ಲವ್ ಜಿಹಾದ್ ಇವೆಲ್ಲ ಖಂಡಿಸಿ ಸಮಾವೇಶ ಮಾಡುತ್ತೇವೆ ಎಂದರು.
ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಸರ್ಕಾರಕ್ಕೆ ಹಿಂದುಗಳ ರಕ್ಷಣೆ ಮಾಡಲಾಗುತ್ತಿಲ್ಲಾ, ಸರ್ಕಾರ ಒಂದೊಂದು ಸಮುದಾಯಗಳನ್ನು ಟಾರ್ಗೆಟ್ ಮಾಡುತ್ತಿದೆ. ಸಿಇಟಿ ಪರೀಕ್ಷೆಯಲ್ಲಿ ಜನಿವಾರ ತೆಗೆಸಿದರು. ಬಸವಾದಿ ಪ್ರಮುಖರೆಂದು ಹೇಳಿ ವಿಭೂತಿ ಹಾಗೂ ಲಿಂಗವನ್ನೂ ತೆಗೆಯುತ್ತಾರೆ ಎಂದು ವಾಗ್ದಾಳಿ ನಡೆಸಿದರು.