ಹೊಸದಿಗಂತ ಡಿಜಿಟಲ್ ಡೆಸ್ಕ್ :
ಸಂಸದ ಸ್ಥಾನದಿಂದ ಅನರ್ಹ ವಿಚಾರಕ್ಕೆ ಸಂಬಂಧಿಸಿದ ಒಂದು ದಿನದ ನಂತರ ಸುದ್ದಿಗೋಷ್ಠಿ ನಡೆಸಿ ರಾಹುಲ್ ಗಾಂಧಿ ಮಾತನಾಡಿದ್ದಾರೆ.
ದೇಶದ ಪ್ರಧಾನಿಯು ಅದಾನಿ ಕುರಿತು ನಾನು ಮಾಡಿದ ಭಾಷಣದಿಂದ ಹೆದರಿದ್ದಾರೆ. ಅವರ ಕಣ್ಣುಗಳಲ್ಲಿ ನಾನು ಭಯವನ್ನು ನೋಡಿದ್ದೇನೆ. ಹಾಗಾಗಿ, ಮೊದಲು ನನ್ನ ವಿರುದ್ಧ ಆರೋಪ ಮಾಡಲಾಯಿತು. ವಿಷಯಾಂತರ ಮಾಡಲು ಯತ್ನಿಸಲಾಯಿತು. ಈಗ ಕೊನೆಗೆ ನನ್ನನ್ನು ಅನರ್ಹಗೊಳಿಸಲಾಗಿದೆ. ಆದರೆ, ನಾನು ದೇಶದ ಜನರ ಧ್ವನಿಯಾಗಿ ಕೆಲಸ ಮಾಡುತ್ತಿದ್ದಾರೆ. ಅವರಿಗಾಗಿ ಧ್ವನಿ ಎತ್ತುತ್ತಿದ್ದೇನೆ. ನನ್ನ ವಿರುದ್ಧ ಯಾವ ಗುರಾಣಿ ಬಳಸಿದರೂ ನಾನು ಹಿಂಜರಿಯುವುದಿಲ್ಲ, ಹೆದರುವುದಿಲ್ಲ. ಸಂಸತ್ತಿನಿಂದ ನನ್ನನ್ನು ಶಾಶ್ವತವಾಗಿ ಅನರ್ಹಗೊಳಿಸಿದರೂ ನಾನು ಜನರ ಪರವಾಗಿ ಕೆಲಸ ಮಾಡುತ್ತೇನೆ ಎಂದರು.
ನನ್ನನ್ನು ಬಂಧಿಸಿ, ಜೈಲಿಗೆ ಕಳುಹಿಸಿ. ಆದರೆ, ನಾನು ದೇಶದ ಜನರ ಪರವಾಗಿ ಮಾತನಾಡುವುದನ್ನು ನಿಲ್ಲಿಸುವುದಿಲ್ಲ. ಅದಾನಿ ಪ್ರಕರಣದ ಕುರಿತು ಮಾತನಾಡುವುದನ್ನು ಬಿಡುವುದಿಲ್ಲ’ ಎಂದು ಹೇಳಿದ್ದಾರೆ. ಹಾಗೆಯೇ, ಬಿಜೆಪಿ ಆಗ್ರಹದಂತೆ ಕ್ಷಮೆಯಾಚಿಸಲು ನಾನು ಸಾವರ್ಕರ್ ಅಲ್ಲ, ಗಾಂಧಿ ಎಂದು ಹೇಳಿದರು.
ನನ್ನ ರಾಹುಲ್ ಗಾಂಧಿ ಇದ್ದೇನೆಯೇ ಹೊರತು, ಸಾವರ್ಕರ್ ಅಲ್ಲ. ಗಾಂಧಿಗಳು ಯಾವುತ್ತಿಗೂ ಕ್ಷಮೆಯಾಚಿಸುವುದಿಲ್ಲ. ಹಾಗಾಗಿ, ಗೌತಮ್ ಅದಾನಿ ಪ್ರಕರಣ ಸೇರಿ ಯಾವುದೇ ವಿಷಯಗಳ ಕುರಿತು ನಾನು ಮಾತನಾಡಿರುವ ಕುರಿತು ಕ್ಷಮೆಯಾಚಿಸುವ ಪ್ರಶ್ನೆಯೇ ಇಲ್ಲ ಎಂದು ರಾಹುಲ್ ಗಾಂಧಿ ಹೇಳಿದರು.
ಪ್ರಜಾಪ್ರಭುತ್ವದ ಮೇಲೆ ದಾಳಿ ನಡೆಯುತ್ತಿದೆ. ಪ್ರತಿದಿನವೂ ದಾಳಿಯ ನಿದರ್ಶನಗಳನ್ನು ನಾವು ನೋಡುತ್ತಿದ್ದೇವೆ. ಅಷ್ಟಕ್ಕೂ, ನಾನೇನು ಮಾಡಿದೆ? ಪ್ರಧಾನಿ ಹಾಗೂ ಅದಾನಿ ಜತೆಗಿನ ಸಂಬಂಧದ ಬಗ್ಗೆ ಮಾತನಾಡಿದೆ. ಅಕ್ರಮದ ಬಗ್ಗೆ ಪ್ರಸ್ತಾಪಿಸಿದೆ. ಅಷ್ಟಕ್ಕೇ, ನನ್ನ ಮೇಲೆ ದಾಳಿ ನಡೆಯಿತು. ಲೋಕಸಭೆಯಲ್ಲಿ ನಾನು ಭಾಷಣ ಮಾಡಲು ಅಡ್ಡಿಗೊಳಿಸಲಾಯಿತು. ನನ್ನ ಭಾಷಣವನ್ನು ತಿರುಚಲಾಯಿತು. ಕೆಲವು ಸಚಿವರು ಸುಳ್ಳು ಹೇಳಿದರು ಎಂಬುದಾಗಿ ದೂರಿದರು.